ಸಮಗ್ರ ನ್ಯೂಸ್: ಆರ್ ಎಸ್ಎಸ್ ಮುಖಂಡರೊಬ್ಬರ ಪ್ರಚೋದರಕಾರಿ ಭಾಷಣದ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕಾರಣ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಶರಣ್ ಪಂಪ್ವೆಲ್ ಅವರ ಜಾಲತಾಣದ ಖಾತೆಯಲ್ಲಿ ಈ ವಿಡಿಯೋ ಹರಿದಾಡಿದ ಹಿನ್ನೆಲೆಯಲ್ಲಿ ಕದ್ರಿ ಠಾಣಾ ಪೊಲೀಸರು ಸುಮೋಟೊ ದಾಖಲಿಸಿಕೊಂಡು ಅವರನ್ನು ಬಂಧಿಸಿದ್ದಾಗಿ ತಿಳಿದುಬಂದಿದೆ.
ವಿಡಿಯೊದಲ್ಲೇನಿದೆ?: ಕಳೆದ ಎರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಮಕ್ಕಳು ಹುಟ್ಟಿದರು ಎಂದು ನಾನೊಂದು ಲೆಕ್ಕ ತೆಗಿದಿದ್ದೇನೆ. 45,700 ಮಕ್ಕಳು ಹುಟ್ಟಿದ್ದು, ಆ ಪೈಕಿ 23,200 ಮಕ್ಕಳು ಹಿಂದೂಗಳು. 22,200 ಮಕ್ಕಳು ಅಲ್ಪಸಂಖ್ಯಾತರ ಮಕ್ಕಳು. ನಮ್ಮ ಜಿಲ್ಲೆಯ ಶೇ. 78 ಜನಸಂಖ್ಯೆಗೆ ಹುಟ್ಟಿದ ಮಕ್ಕಳು 23,000, ಆದರೆ ಶೇ. 28ರಷ್ಟಿರುವವ ಸಮುದಾಯಕ್ಕೆ ಹುಟ್ಟಿದ್ದು 22,000. ಹೀಗಾದ್ರೆ ಇನ್ನೊಂದು 15 ವರ್ಷಗಳಲ್ಲಿ ನಮ್ಮ ಊರು ಎಲ್ಲಿ ಹೋಗುತ್ತೆ? ಆಗ ದೇಶ, ಸಮಾಜ ಉಳಿಯಲು ಸಾಧ್ಯವಾ? ಎಂದು ಆರೆಸ್ಸೆಸ್ ಮುಖಂಡರು ಪ್ರಶ್ನಿಸಿರೋದು ವಿಡಿಯೋ ತುಣುಕಿನಲ್ಲಿದೆ.
ತಮ್ಮನ್ನು ವಶಕ್ಕೆ ಪಡೆದ ಬಗ್ಗೆ ಕದ್ರಿ ಪೊಲೀಸ್ ಠಾಣೆ ಮುಂಭಾಗ ಶರಣ್ ಪಂಪ್ವೆಲ್ ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಮುಖಂಡನಾಗಿ ಸಮಾಜದ ಆಗು ಹೋಗುಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದೆ. ನೋಟಿಸ್ ಕೊಟ್ಟು ಅರೆಸ್ಟ್ ಮಾಡುವ ಬದಲು ಬೇರೆ ವರ್ತನೆ ತೋರಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಳ್ಳುವ ಪ್ರಯತ್ನಕ್ಕೆ ಸರಕಾರ ಮುಂದಾಗಿದೆ ಎಂದು ಆರೋಪಿಸಿದ್ದಾರೆ. ಸದ್ಯ ಶರಣ್ ಪಂಪ್ವೆಲ್ಗೆ ನೋಟಿಸ್ ನೀಡಿ ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿ ಮಿಥುನ್ ಎದುರು ಹಾಜರುಪಡಿಸಲಾಗಿದೆ. ಮುಚ್ಚಳಿಕೆ ನೀಡಿದ ಬಳಿಕ ಅವರನ್ನು ಬಿಟ್ಟು ಕಳುಹಿಸುವ ಸಾಧ್ಯತೆ ಇದೆ.






