ಸಮಗ್ರ ನ್ಯೂಸ್: ಆರೆಸೆಸ್ಸ್ ಬ್ಯಾನ್ ವಿಚಾರವಾಗಿ ರಾಜ್ಯ ಸರ್ಕಾರ ಮತ್ತು ಬಿಜೆಪಿ ನಡುವೆ ಗುದ್ದಾಟ ನಡೆಯುತ್ತಿದ್ದರೆ, ಅತ್ತ ಆರೆಸೆಸ್ಸ್ ಬಿಜೆಪಿಗೇ ಗುದ್ದು ನೀಡಿದೆ. ನೀವೆಲ್ಲ ಸಂಘದ ವಕ್ತಾರರಾಗಬೇಡಿ.ಸಂಘದ ವಿಚಾರದಲ್ಲಿ ನೀವೇನು ಮಾತಾಡೋದು. ಅದನ್ನ ಸಂಘ ನೋಡಿಕೊಳ್ಳುತ್ತೆ. ನಿಮ್ಮ ಕೆಲಸ ನೀವು ನೋಡಿ ಎಂದು ಗರಂ ಆಗಿದೆ ಎನ್ನಲಾಗಿದೆ.
ರಾಜ್ಯ ರಾಜಕೀಯದಲ್ಲಿ ಇದೀಗ ಸದ್ದು ಮಾಡುತ್ತಿರುವ ಆರ್.ಎಸ್.ಎಸ್. ಚಟುವಟಿಕೆಗಳ ನಿಷೇಧ ಕುರಿತ ಸಚಿವ ಪ್ರಿಯಾಂಕ್ ಖರ್ಗೆ ಅವರ ಪತ್ರ ವಿವಾದವು ಒಂದು ಹೊಸ ತಿರುವು ಪಡೆದುಕೊಂಡಿದೆ. ಕಾಂಗ್ರೆಸ್ ಸರ್ಕಾರಕ್ಕೆ ತಿರುಗೇಟು ನೀಡಲು ಆತುರದಲ್ಲಿದ್ದ ಬಿಜೆಪಿ ನಾಯಕರ ಮೇಲೆ ಸ್ವತಃ ಆರ್.ಎಸ್.ಎಸ್. ನಾಯಕರು ಗರಂ ಆಗಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ನಾಯಕರು ಮಾಧ್ಯಮಗಳ ಮುಂದೆ ವಕಾಲತ್ತು ವಹಿಸುತ್ತಿರುವುದಕ್ಕೆ ಸಂಘದ ವರಿಷ್ಠರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಪ್ರಿಯಾಂಕ್ ಖರ್ಗೆ ಅವರ ಪತ್ರದ ವಿಷಯದಲ್ಲಿ ಅತಿಯಾಗಿ ಮಾತನಾಡುತ್ತಿದ್ದ ಬಿಜೆಪಿ ನಾಯಕರಿಗೆ ಆರ್.ಎಸ್.ಎಸ್.ನ ಪ್ರಮುಖರಿಂದಲೇ ತೀವ್ರ ತರಾಟೆ ಬಿದ್ದಿದೆ. ಆರ್.ಎಸ್.ಎಸ್. ನಾಯಕರು ಬಿಜೆಪಿಗರನ್ನು ನೇರವಾಗಿ,ನೀವು ಬಿಜೆಪಿ ವಕ್ತಾರರೋ? ಇಲ್ಲ ಸಂಘದ ವಕ್ತಾರರೋ? ಎಂದು ಪ್ರಶ್ನಿಸಿದ್ದಾರಂತೆ.
ಆರೆಸೆಸ್ಸ್ ಅನ್ನು ಹಿಂದೆ ಬ್ಯಾನ್ ಮಾಡಿದ್ದನ್ನ ನೋಡಿದ್ದೇವೆ ಇದೇನು ಹೊಸದಲ್ಲ, ಸರ್ಕಾರ ಏನು ಮಾಡುತ್ತೋ ಮಾಡಲಿ.ಸಂಘ ಅದನ್ನ ಗಮನಿಸುತ್ತದೆ. ಸಮರ್ಥವಾಗಿ ಎದುರಿಸುವ ಶಕ್ತಿ ಸಂಘಕ್ಕಿದೆ. ನೀವೆಲ್ಲ ಪಕ್ಷದ ವಿಚಾರವನ್ನ ನೋಡಿಕೊಳ್ಳಿ ಎಂದು ಬಿಜೆಪಿ ನಾಯಕರಿಗೆ ಖಡಕ್ಕಾಗಿಯೆ ಹೇಳಿದ್ದಾರಂತೆ.
ಆರ್.ಎಸ್.ಎಸ್.ನ ಈ ಸೂಚನೆಯ ಬೆನ್ನಲ್ಲೇ ಬಿಜೆಪಿ ನಾಯಕರು ಸೈಲೆಂಟ್ ಆಗಿದ್ದಾರೆ. ಆರ್.ಎಸ್.ಎಸ್. ನಾಯಕರ ಸೂಚನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ, ವಿವಾದಿತ ವಿಚಾರಗಳ ಕುರಿತು ಟಿವಿ ಚರ್ಚೆಗಳಿಗೆ ಹೋಗದಿರಲು ತೀರ್ಮಾನಿಸಿದೆ. ಪಕ್ಷದ ನಿರ್ಧಾರದ ಪ್ರಕಾರ, ಇನ್ನು ಮುಂದೆ ಪತ್ರಿಕಾಗೋಷ್ಠಿ ವೇಳೆ ಈ ಕುರಿತು ಪ್ರಶ್ನೆ ಕೇಳಿದರೆ ಮಾತ್ರ ಉತ್ತರ ನೀಡಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ.ಆರ್.ಎಸ್.ಎಸ್.ನ ಈ ಒಂದು ಮಾತಿಗೆ ಬಿಜೆಪಿಯ ನಾಯಕರ ಬಾಯಿಗೆ ಬೀಗ ಬಿದ್ದಿದೆ.







