ಸಮಗ್ರ ನ್ಯೂಸ್: ಕೆಂಪು ಕಲ್ಲು ಗಣಿಗಾರಿಕೆಗೆ ಹೊಸದಾಗಿ ರೂಪಿಸಲಿರುವ ನಿಯಮಾವಳಿಗಳಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯಲಿದೆ ಎಂಬ ನಿರೀಕ್ಷೆ ಮತ್ತೆ ಹುಸಿಯಾಗಿದೆ. “ಹೊಸ ನಿಯಮಾವಳಿಗೆ ಸೆ. 4ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯಲಿದೆ’ ಎಂದು ಸರಕಾರದ ಪ್ರಮುಖರು ತಿಳಿಸಿದ್ದರು.
ಆದರೆ, ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ಕೆಂಪು ಕಲ್ಲಿಗೆ ರಾಯಲ್ಟಿ ಏರಿಕೆ ಮಾಡಿ ನಿಯಮಾವಳಿ ಬಿಗಿಗೊಳಿಸಿದ ಕಾರಣದಿಂದ ಜಿಲ್ಲೆಯಲ್ಲಿ ಸುಮಾರು 3 ತಿಂಗಳಿನಿಂದ ಎಲ್ಲ ರೀತಿಯ ವ್ಯವಹಾರ-ವಹಿವಾಟು ಸ್ತಬ್ಧವಾಗಿದೆ. ಸಾವಿರಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯಮ ಚಟುವಟಿಕೆಗಳು ಸಂಪೂರ್ಣ ನಿಂತಿದ್ದು, ಆರ್ಥಿಕ ವಹಿವಾಟು ಸ್ಥಗಿತವಾಗಿದೆ. ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ವಿವಿಧ ಸಂಘಟನೆಗಳು ಜನಪ್ರತಿನಿಧಿಗಳ ಗಮನಸೆಳೆದರೂ ತರಹೇವಾರಿ ಸಭೆ ನಡೆಸುತ್ತಾರೆಯೇ ವಿನಃ ಅಂತಿಮ ಪರಿಹಾರ ಮಾತ್ರ ಆಗಿಲ್ಲ.
ಈಗಾಗಲೇ ಮೂರು ಬಾರಿ ಸಚಿವರು, ಅಧಿಕಾರಿಗಳೊಂದಿಗೆ ಬೆಂಗಳೂರು, ಮಂಗಳೂರಿನಲ್ಲಿ ಸಭೆ ನಡೆಸಲಾಗಿದೆ. ರಾಜಸ್ವವನ್ನು ಇಳಿಕೆ ಮಾಡುವುದು ಹಾಗೂ ಪರವಾನಿಗೆ ನೀಡುವ ವಿಧಾನವನ್ನು ಸರಳೀಕರಿಸುವುದಕ್ಕೆ ಸೂಚನೆಯೂ ಆಗಿದೆ. ಹಾಗೂ ಇದಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆಯೂ
ಸಿಗಲಿದೆ ಎಂದು ಹೇಳಲಾಗಿತ್ತು. ಆದರೆ, ಇದು ಇನ್ನೂ ಆಗದೆ ಸರಳೀಕರಣ ನೀತಿ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಇಲ್ಲ ಎಂಬಂತಾಗಿದೆ.
ಕೆಂಪು ಕಲ್ಲು ಕೋರೆಗೆ ಸಂಬಂಧಿಸಿ ನಿಯಮ ಸರಳೀಕರಣಕ್ಕೆ ಸಂಬಂಧಿಸಿ ಸರಕಾರದಿಂದ ಸೂಚನೆ ಬಂದ ಕೂಡಲೇ ಅನುಷ್ಠಾನಿಸಲಾಗುವುದು. ಪ್ರಸ್ತುತ ದ.ಕ. ಜಿಲ್ಲೆಯಲ್ಲಿ 24 ಮಂದಿ ಅರ್ಜಿದಾರರಿಗೆ ಈಗಿನ ರಾಯಲ್ಟಿ ಪ್ರಕಾರ ಅಧಿಕೃತ ಪರವಾನಿಗೆ ನೀಡಲಾಗಿದೆ ಎಂದು ಗಣಿ ಇಲಾಖೆಯ ಹಿರಿಯ ಭೂವಿಜ್ಞಾನಿ ಸಂದೀಪ್ ಹೇಳಿದ್ದಾರೆ.







