ಸಮಗ್ರ ನ್ಯೂಸ್: ಕಳೆದ 3 ದಿನಗಳ ಹಿಂದೆ ಕೊಲ್ಲೂರಿಗೆ ಆಗಮಿಸಿದ್ದ ವಸುಧಾ ಚಕ್ರವರ್ತಿ (46) ಅವರ ಮೃತದೇಹ ಇಲ್ಲಿನ ಮಾವಿನಕಾರು ಸೇತುವೆ ಬಳಿ ಸೌಪರ್ಣಿಕಾ ನದಿಯಲ್ಲಿ ಆ. 30ರಂದು ಪತ್ತೆಯಾಗಿದೆ.
ಬೆಂಗಳೂರು ತ್ಯಾಗರಾಜ ನಗರ ನಿವಾಸಿ ಸಿ.ಆರ್. ಗೋವಿಂದರಾಜು ಅವರ ಪ್ರಥಮ ಪುತ್ರಿ ವಸುಧಾ 28ರಂದು ಕೊಲ್ಲೂರಿಗೆ ಆಗಮಿಸಿದ್ದು, ಖಾಸಗಿ ವಸತಿಗೃಹದ ಬಳಿ ಕಾರು ನಿಲ್ಲಿಸಿ ದೇಗುಲಕ್ಕೆ ಹೋಗಿದ್ದರು. ಬಳಿಕ ಸೌಪರ್ಣಿಕಾ ನದಿಯತ್ತ ತೆರಳಿ ನಾಪತ್ತೆಯಾಗಿದ್ದರು. ಆ. 29ರಂದು ಮುಳುಗು ತಜ್ಞ ಈಶ್ವರ ಮಲ್ಪೆ, ಅಗ್ನಿಶಾಮಕ ದಳ ಹಾಗೂ ಪೊಲೀಸರು ಹಾಗು ಸ್ಥಳೀಯರು ಸೌಪರ್ಣಿಕಾ ನದಿ ಸಹಿತ ವಿವಿದೆಢೆ ಶೋಧ ಕಾರ್ಯ ನಡೆಸಿದ್ದರೂ ಅವರ ಪತ್ತೆಯಾಗಿರಲಿಲ್ಲ.
ಆ. 30ರಂದು ಬೆಳಗ್ಗೆ ಮತ್ತೆ ಈಶ್ವರ ಮಲ್ಪೆ ರಭಸದಿಂದ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಗಿಳಿದು ಶೋಧ ನಡೆಸಿದಾಗ ಮಾವಿನಕಾರು ಬಳಿಯ ಪೊದೆಯಲ್ಲಿ ಮೃತದೇಹ ಪತ್ತೆಯಾಯಿತು. ಮೃತ ದೇಹವನ್ನು ದಡ ಸೇರಿಸಿದ ಅವರ ಸಾಹಸವನ್ನು ಗ್ರಾಮಸ್ಥರು ಹಾಗೂ ಪೊಲೀಸರು ಅಭಿನಂದಿಸಿರುತ್ತಾರೆ.
ಕಾರ್ಯಾಚರಣೆಯಲ್ಲಿ ಹರೀಶ ಪೂಜಾರಿ, ಸ್ಥಳೀಯರಾದ ಪ್ರದೀಪ್ ಭಟ್ ಸಂಪ್ರ, ಉಮೇಶ ಭಟ್ ಗೋಳಿಗುಡ್ಡೆ, ಜಯಪ್ರಕಾಶ ಶೆಟ್ಟಿ ಮಾವಿನಕಾರು, ನಾಗರಾಜ್ ಕೊಲ್ಲೂರು ಮತ್ತು ಪೊಲೀಸರು ಸಹಕರಿಸಿದ್ದರು.
ಸಿ.ಆರ್. ಗೋವಿಂದರಾಜು ಕುಟುಂಬಿಕರು ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ಅನಂತರ ಮೃತದೇಹವನ್ನು ಪಡೆದಿದ್ದು, ಕೊಲ್ಲೂರಿನಲ್ಲೇ ಶವಸಂಸ್ಕಾರ ನಡೆಸುವುದೆಂದು ನಿರ್ಧರಿಸಿದ್ದಾರೆ.







