ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರೋದಾಗಿ ಬುರುಡೆ ಬಿಟ್ಟ ಮಾಸ್ಕ್ ಮ್ಯಾನ್ ಚಿನ್ನಯ್ಯನ ವಿರುದ್ಧ ವಿಶೇಷ ತನಿಖಾ ತಂಡ ಹೊಸ ಸೆಕ್ಷನ್ಗಳನ್ನು ಹಾಕಿದೆ.
ಇದರ ಪ್ರಕಾರ, ಬುರುಡೆ ಪ್ರಕರಣದಲ್ಲಿ ಚಿನ್ನಯ್ಯನೇ ಎ-1 ಆಗಿದ್ದಾನೆ. ಇದು ಪಿತೂರಿಯಲ್ಲದೆ ಮತ್ತೇನೂ ಅಲ್ಲ ಅಂತ ಕೋರ್ಟ್ ಗೆ ಮಾಹಿತಿ ಕೊಟ್ಟಿದೆ. ಸುಳ್ಳು ಮಾಹಿತಿಯನ್ನು ಕೊಟ್ಟಿದ್ದರಿಂದ ಆತನನ್ನು ಬಂಧಿಸಲಾಗಿದೆ ಅಂತ ತಿಳಿಸಿದೆ. ಇದು ಕಪೋಲಕಲ್ಪಿತ ಷಡ್ಯಂತ್ರ ಅಂತಲೂ ಹೇಳಿರುವ ಎಸ್ಐಟಿ ಬಿಎನ್ಎಸ್ ಸೆಕ್ಷನ್ 336, 227 ರಿಂದ 238ರ ಅಡಿ ಎಫ್ಐಆರ್ ದಾಖಲಿಸಿದೆ.
ಇನ್ನು ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಆಶ್ರಯ ಕೊಟ್ಟ ಆರೋಪದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ನಿನ್ನೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿ ಒಂದಷ್ಟು ಮಹತ್ವದ ಸಾಕ್ಷ್ಯಗಳನ್ನ ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಆರಂಭದ ದಿನದಿಂದಲೂ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ವಾಸ್ತವ್ಯವಿದ್ದ ಚಿನ್ನಯ್ಯನಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿತ್ತು. ತನಿಖಾಧಿಕಾರಿ ದಯಾಮಾ ನೇತೃತ್ವದಲ್ಲಿ ಶೋಧಕಾರ್ಯ ನಡೆದಿದ್ದು ಚಿನ್ನಯ್ಯನ ಮೊಬೈಲ್, ದಾಖಲೆ ಪತ್ರ, ಬಟ್ಟೆಗಳ ಬ್ಯಾಗ್ ವಶಕ್ಕೆ ಪಡೆಯಲಾಗಿದೆ.
ಮೊಬೈಲ್ ಪರಿಶೀಲಿಸಿದಾಗ ಕಾಲ್ ಡೀಟೇಲ್ಸ್ ನಾಪತ್ತೆಯಾಗಿದೆ. ಎಸ್ಐಟಿ ತನಿಖೆಗೆ ಹೋಗಲು ಚಿನ್ನಯ್ಯ ಬಳಸ್ತಿದ್ದ ಬಿಳಿ ಕಾರ್ನ ಮಾಲೀಕನಿಗೂ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ.
ಇನ್ನು, ತಿಮರೋಡಿ ಮನೆಯಲ್ಲಿದ್ದ ಮೂರು ತಲ್ವಾರ್, ಸಿಸಿಟಿವಿ ಹಾರ್ಡ್ ಡಿಸ್ಕ್, ಮಹೇಶ್ ಶೆಟ್ಟಿ ಹೆಂಡತಿ ಮತ್ತು ಇಬ್ಬರು ಮಕ್ಕಳ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಸಹೋದರ ಮೋಹನ್ ಶೆಟ್ಟಿ ಮನೆಯಿಂದ ಲ್ಯಾಪ್ಟಾಪ್, ಹಾರ್ಡ್ ಡಿಸ್ಕ್, ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಇದರ ನಡುವೆ ಮಾಸ್ಕ್ ಮ್ಯಾನ್ ಬಂಧನ, ಮಹೇಶ್ ತಿಮರೋಡಿ ಮನೆ ಮೇಲೆ ದಾಳಿ ಬೆನ್ನಲ್ಲೇ ಸುಜಾತಾ ಭಟ್, ನಿನ್ನೆ(ಆಗಸ್ಟ್ 26) ಬೆಳಗಿನ ಜಾವ 5ರ ಸುಮಾರಿಗೆ ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಓಡೋಡಿ ಬಂದಿದ್ದು, ತಮ್ಮನ್ನು ವಿಚಾರಣೆ ನಡೆಸಿ ಎಂದು ಮಲಗಿದ್ದ ಅಧಿಕಾರಿಗಳನ್ಜು ಎಬ್ಬಿಸಿದ್ದಾರೆ. ಇನ್ನು ಯಾವುದೇ ನೋಟಿಸ್ ನೀಡದೇ ವಿಚಾರಣೆ ಬಂದ ಸುಜಾತಾ ಭಟ್ ಅವರನ್ನು ಎಸ್ಐಟಿ ಅಧಿಕಾರಿಗಳು ನಿನ್ನೆ(ಆಗಸ್ಟ್ 26) ವಿಚಾರಣೆ ನಡೆಸಿ ಕೆಲ ಮಾಹಿತಿ ಪಡೆದುಕೊಂಡಿದ್ದರು. ಇಂದು(ಆಗಸ್ಟ್ 27) ಎರಡನೇ ದಿನವೂ ಸಹ ಹೊರಗಡೆ ಊಟಕ್ಕೂ ಬಿಡದೇ ತೀವ್ರ ವಿಚಾರಣೆಗೊಳಪಡಿಸಿದ್ದು, ಅಧಿಕಾರಿಗಳ ಪ್ರಶ್ನೆಗಳ ಸುರಿಮಳೆಗೆ ಸುಜಾತಾ ಭಟ್ ತಪ್ಪಾಯ್ತು ನನ್ನು ಬಿಟ್ಟುಬಿಡಿ. ದೂರು ವಾಪಸ್ ಪಡೆದುಕೊಳ್ಳುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಎರಡನೇ ದಿನದ ವಿಚಾರಣೆ ವೇಳೆ ಎಸ್ಐಟಿ ಅಧಿಕಾರಿಗಳ ಪ್ರಶ್ನೆಗಳ ಸುರಿಮಳೆಗೆ ಸುಜಾತಾ ಭಟ್ ಉತ್ತರಿಸಲಾಗದೇ ಕಕ್ಕಾಬಿಕ್ಕಿಯಾಗಿದ್ದು, ತಪ್ಪಾಯಿತು ನನ್ನನ್ನು ಬಿಟ್ಟು ಬಿಡಿ ಎಂದು ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಅನನ್ಯ ಭಟ್ ನಾಪತ್ತೆ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳಿಗೆ ನೀಡಿರುವ ದೂರನ್ನ ವಾಪಸ್ ಪಡೆಯುವುದಾಗಿ ಸುಜಾತಾ ಭಟ್ ಎಸ್ಐಟಿ ಅಧಿಕಾರಿಗಳ ಮುಂದೆ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಅನನ್ಯ ಭಟ್ ಪ್ರಕರಣದ ರಹಸ್ಯ ಹಾಗೂ ಅದರ ಹಿಂದಿರುವವರ ಹೆಸರುಗಳನ್ನು ಸುಜಾತಾ ಭಟ್ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಅನನ್ಯಾ ಭಟ್ ಕಥೆ ಹೆಣೆದವರಿಗೆ ಸಂಕಷ್ಟ ಶುರುವಾಗಿದೆ. ಇನ್ನು ದೂರು ಹಿಂಪಡೆಯುವುದಾಗಿ ಸುಜಾತಾ ಹೇಳಿಕೆಗೆ ಎಸ್ಐಟಿ ಅಧಿಕಾರಿಗಳು ಸಮ್ಮತಿಸಿದ್ದಾರೆ.







