ಸಮಗ್ರ ನ್ಯೂಸ್: ಧರ್ಮಸ್ಥಳ ಇದೀಗ ಇಡೀ ರಾಷ್ಟ್ರದ ಗಮನ ಸೆಳೆಯುತ್ತಿದ್ದು, ಅನಾಮಿಕ ವ್ಯಕ್ತಿಯೊಬ್ಬನ ದೂರಿನ ಬೆನ್ನಲ್ಲೇ ಇದೀಗ ಎಸ್ ಐಟಿ ರಚನೆಯಾಗಿದ್ದು, ಈ ನಡುವೆ ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ಕಲಬುರ್ಗಿಯಿಂದ ಪಾದಯಾತ್ರೆಯಲ್ಲಿ ಬಂದಿದ್ದೇವೆ ಎಂದು ಹೇಳಿಕೊಂಡು ಧರ್ಮಸ್ಥಳಕ್ಕೆ ಹತ್ತಕ್ಕೂ ಹೆಚ್ಚು ಮಂದಿ ಯುವಕರು ಬಂದಿದ್ದು, ಇವರನ್ನು ಸ್ಥಳೀಯರು ಅಡ್ಡಗಟ್ಟಿದ್ದು ಭಾರೀ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು.
ಸೌಜನ್ಯಳಿಗೆ ನ್ಯಾಯ ಎಂಬ ಧ್ಯೆಯದೊಂದಿಗೆ ಕಲಬುರಗಿ ಜಿಲ್ಲೆಯ ಅಳಂದ ತಾಲೂಕಿನ ರುದ್ರವಾಡಿ ಗ್ರಾಮದ ಶರಣಪ್ಪ ನೇತೃತ್ವದ ತಂಡವು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹಮ್ಮಿಕೊಂಡಿತ್ತು. ಪಾದಯಾತ್ರೆ ಮುಗಿಸಿ ತಂಡವು ಧರ್ಮಸ್ಥಳ ಕ್ಷೇತ್ರದ ದ್ವಾರದ ಬಳಿ ಪ್ರವೇಶಿಸಲು ಮುಂದಾದಾಗ, ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸ್ಥಳೀಯರು ಮತ್ತು ಭಕ್ತರು ಅವರನ್ನು ತಡೆದರು.
ಪಾದಯಾತ್ರೆಯ ಸಂದರ್ಭದಲ್ಲಿ ಶರಣಪ್ಪ ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ನಕಲಿ ದೇವಮಾನವ ಎಂಬ ಪದ ಬಳಸಿ ನಿಂದಿಸಿದ್ದಾರೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಧರ್ಮಸ್ಥಳ ಪೊಲೀಸರು ನೆರೆದ ಗುಂಪನ್ನು ಚದುರಿಸಿದರು.
ಈ ವೇಳೆ, ಕಲಬುರಗಿಯ ಯುವಕರು ಮತ್ತು ಸ್ಥಳೀಯರ ನಡುವೆ ವಾಗ್ವಾದ ನಡೆದಿದ್ದು, ನಾವು ಹೆಗ್ಗಡೆಯವರನ್ನು ನಕಲಿ ದೇವಮಾನವ ಎಂದು ಕರೆದಿಲ್ಲ. ಯಾರು ತಪ್ಪು ಮಾಡಿದ್ದಾರೋ ಅವರನ್ನು ಉದ್ದೇಶಿಸಿ ಹೇಳಿದ್ದು, ಸೌಜನ್ಯಾಗೆ ನ್ಯಾಯ ಸಿಗಬೇಕೆಂದು ಧರ್ಮಸ್ಥಳ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿಯಲ್ಲಿ ಬೇಡಿಕೊಳ್ಳಲು ಬಂದಿದ್ದೇವೆ. ನೀವು ನಮ್ಮನ್ನು ತಡೆಯಬೇಡಿ, ನಾವು ಪ್ರತಿಭಟನೆ ಮಾಡುವುದಿಲ್ಲ. ಕೇವಲ ದರ್ಶನ ಮಾಡಿಕೊಂಡು ಹೋಗುತ್ತೇವೆ ಎಂದು ಹೇಳಿದ್ದಾನೆ. ಆದರೆ ಸ್ಥಳೀಯರು ಅದಕ್ಕೊಪ್ಪದೆ ಲೈವ್ ನಲ್ಲಿ ಕ್ಷಮೇ ಕೇಳು ಎಂದಿದ್ದಾರೆ. ಆದರೆ ಕಬ್ಬಾ ಶರಣ್ ಕ್ಷಮೆ ಕೇಳಿ ವಿಡಿಯೋ ಮಾಡಲು ನಿರಾಕರಿಸಿದ್ದಾನೆ. ಕೊನೆಗೆ, ಧರ್ಮಸ್ಥಳ ಪೊಲೀಸರು ಮತ್ತು ಸ್ಥಳೀಯರು ಯುವಕರನ್ನು ಅಡ್ಡಹಾಕಿ, ಧರ್ಮಸ್ಥಳ ಗೇಟ್ ಒಳಗೆ ಪ್ರವೇಶ ಮಾಡದಂತೆ ತಡೆದಿದ್ದಾರೆ.







