ಸಮಗ್ರ ನ್ಯೂಸ್: ಕರ್ನಾಟಕದ ಗಡಿಭಾಗ ಕೇರಳದ ಪಾಣತ್ತೂರಿನ ಮಂಞನಡ್ಕ ಎಂಬಲ್ಲಿ ಪ್ಲಾಂಟೇಷನ್ ನಲ್ಲಿ ಹಿಟಾಚಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬೆಳಗಾವಿ ಮೂಲದ ಯುವಕನೋರ್ವ ನಾಪತ್ತೆಯಾಗಿರುವ ಘಟನೆ ಜು.17ರಂದು ಘಟನೆ ವರದಿಯಾಗಿದೆ.
ನಾಪತ್ತೆಯಾದ ಯುವಕನನ್ನು ಕೇರಳ ಸರಕಾರದ ಅಧಿನಕ್ಕೊಳಪಡುವ ಗೇರು ಬೀಜದ ಪ್ಲಾಂಟೇಷನ್ ನಲ್ಲಿ ಹಿಟಾಚಿಯಲ್ಲಿ ಹೆಲ್ಪರ್ ಕೆಲಸ ಮಾಡುತ್ತಿದ್ದ 19 ವರ್ಷ ಪ್ರಾಯದ ಯುವಕ ಅನಿಲ್ ಎಂದು ಗುರುತಿಸಲಾಗಿದೆ.
ಹಿಟಾಚಿ ಚಾಲಕನಾದ ಅನಿಲ್ ನೊಂದಿಗೆ ಮಧ್ಯಾಹ್ನ ಊಟ ತರುವಂತೆ ಪಾಣತ್ತೂರು ಕಡೆಗೆ ತನ್ನ ಬೈಕಿನಲ್ಲಿ ಕಳುಹಿಸಿದ್ದರು. ಆದರೆ ಅದೇ ರಸ್ತೆಯಲ್ಲಿ ಬರಬೇಕಾದರೆ ಮಂಞನಡ್ಕ ದೇವಸ್ಥಾನದ ಕೆಳಭಾಗದಲ್ಲಿ ಮುಳುಗು ಸೇತುವೆಯೊಂದಿದೆ. ನಿನ್ನೆ ವಿಪರೀತ ಮಳೆಯಿಂದಾಗಿ ಸೇತುವೆ ಮೇಲೆ ನೀರು ಬಂದಿದ್ದು ಸೇತುವೆ ಮೇಲೆ ಬೈಕ್ ದಾಟಿಸುವಾಗ ನೀರಿನ ಸೆಳೆತಕ್ಕೆ ಸಿಕ್ಕಿ ಯುವಕ ಬೈಕ್ ಸಮೇತ ಕೊಚ್ಚಿಕೊಂಡುಹೋಗಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.
ನಿನ್ನೆಯಿಂದ ಯುವಕನ ಪತ್ತೆಗಾಗಿ ನದಿಯಲ್ಲಿ ಹುಡುಕಾಟ ಆರಂಭಿಸಲಾಗಿದ್ದು ಅನಿಲ್ ಹಾಗೂ ಬೈಕಿನ ಸುಳಿವು ಇನ್ನೂ ಸಿಕ್ಕಿಲ್ಲವೆಂದು ಸ್ಥಳೀಯ ಮೂಲಗಳಿಂದ ತಿಳಿದು ಬಂದಿದೆ.






