ಸಮಗ್ರ ನ್ಯೂಸ್: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಸಂಭವಿಸಿದ ಹಲವಾರು ಕೊಲೆ ಹಾಗೂ ಅತ್ಯಾಚಾರ ಕೊಲೆ ಪ್ರಕರಣಗಳ ಕುರಿತಂತೆ ಜುಲೈ 3ರಂದು ವ್ಯಕ್ತಿಯೊಬ್ಬ ತಾನು ಹೂತಿದ್ದ ಶವಗಳನ್ನು ಹೊರತೆಗೆದು ತೋರಿಸಲು ಸಿದ್ಧ ಎಂದು ಹೇಳಿ ಎಫ್ಐಆರ್ ದಾಖಲಿಸಿದ್ದರು. ಧರ್ಮಸ್ಥಳದಲ್ಲಿ ನಡೆದ ಹಲವಾರು ಅತ್ಯಾಚಾರ ಹಾಗೂ ಕೊಲೆಗಳ ಶವಗಳನ್ನು ತಾನೇ ಹೂತಿಟ್ಟಿದ್ದು, ತನಗೆ ಪಾಪಪ್ರಜ್ಞೆ ಕಾಡುತ್ತಿರುವ ಕಾರಣ ಹೂತಿಟ್ಟ ಸ್ಥಳಗಳನ್ನು ತೋರಿಸುವುದಾಗಿ ತಿಳಿಸಿದ್ದರು.
ಹೀಗೆ ಎಫ್ಐಆರ್ ದಾಖಲಾಗಿ 6 ದಿನಗಳು ಕಳೆದರೂ ಸರಿಯಾದ ರೀತಿಯ ತನಿಖೆ ನಡೆಯುತ್ತಿಲ್ಲ ಎಂದು ಆರೋಪಿಸಿ ಬೆಂಗಳೂರು ಮೂಲದ ವಕೀಲ ಮಂಜುನಾಥ್ ಎನ್ ಅವರು ಡಿಜಿಪಿ ಸಲೀಮ್ ಅವರಿಗೆ ಸಾರ್ವಜನಿಕ ಹಿತಾಸಕ್ತಿ ದೂರನ್ನು ದಾಖಲಿಸಿದ್ದಾರೆ.
ಈ ಪತ್ರದಲ್ಲಿ ಧರ್ಮಸ್ಥಳ ಸನ್ಇನ್ಸ್ಪೆಕ್ಟರ್ ಸಮರ್ಥ ಗಣಿಗೇರ್ ಪ್ರಕರಣವನ್ನು ಕಡೆಗಣಿಸುವ ಹಾಗೂ ಅಕ್ರಮವಾಗಿ ತಿದ್ದುವ ( ಸಾಕ್ಷ್ಯನಾಶ ) ಸಾಧ್ಯತೆಗಳಿವೆ ಎಂದು ಬರೆದಿದ್ದಾರೆ. ಹೀಗೆ ಆರು ದಿನಗಳಾದರೂ ಸರಿಯಾದ ತನಿಖೆ ಆರಂಭವಾಗದೇ ಇರುವುದು ಉದ್ದೇಶಪೂರ್ವಕ ವಿಳಂಬ, ನಿರ್ಲಕ್ಷ್ಯ ಅಥವಾ ಉದ್ದೇಶಪೂರ್ವಕವಾಗಿ ಮರೆಮಾಚುತ್ತಲೂ ಇರಬಹುದು ಎಂದು ಎಚ್ಚರಿಸಿದ್ದಾರೆ.
ಪ್ರಕರಣದ ಗಂಭೀರತೆಯನ್ನು ತಿಳಿಸಲು ಈಗಾಗಲೇ ದೂರಿನ ಪ್ರತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ್, ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಹಾಗೂ ಕರ್ನಾಟಕ ಲೋಕಾಯುಕ್ತಕ್ಕೂ ಸಹ ಕಳುಹಿಸಲಾಗಿದೆ ಎಂದು ಮಂಜುನಾಥ್ ಪತ್ರದಲ್ಲಿ ಬರೆದಿದ್ದಾರೆ.
ʼಇದು ಕೇವಲ ಕಾನೂನು ವಿಷಯವಲ್ಲ, ಇದೊಂದು ಮಾನವ ಸಂಘರ್ಷʼ ಎಂದು ಉಲ್ಲೇಖಿಸಿರುವ ಮಂಜುನಾಥ್ ರಾಜ್ಯ ಪೊಲೀಸ್ ಇಲಾಖೆ ಮೇಲೆ ಸಾರ್ವಜನಿಕರು ಮತ್ತೆ ವಿಶ್ವಾಸವಿಡಲು ಸಂಬಂಧಪಟ್ಟವರು ಸರಿಯಾದ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದಿದ್ದಾರೆ.







