ಸಮಗ್ರ ನ್ಯೂಸ್: ಬಂಟ್ವಾಳ ತಾಲೂಕಿನ ಸಜೀಪದ ದೇರಾಜೆಯಲ್ಲಿ ತಲವಾರು ದಾಳಿ ನಡೆದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅಲ್ಲಿ ನಿಜವಾಗಿ ಬೈಕಿನಲ್ಲಿ ತೆರಳುತ್ತಿದ್ದ ಸವಾರರನ್ನು ಓರ್ವ ವ್ಯಕ್ತಿ ಓಡಿಸಿಕೊಂಡು ಹೋದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಹಮ್ಮದ್ ಮುಕ್ಬುಲ್ ಎಂಬವರು ಬೋಳಿಯಾರು ಕಡೆಯಿಂದ ಮೆಲ್ಕಾರಿಗೆ ಬೈಕಿನಲ್ಲಿ ಸಹಸವಾರರಾಗಿ ಹೋಗುತ್ತಿದ್ದ ಸಂದರ್ಭ ದೇರಾಜೆ ಎಂಬಲ್ಲಿ ಬೈಕಿನಲ್ಲಿ ಕುಳಿತ್ತಿದ್ದ ವ್ಯಕ್ತಿಯೊಬ್ಬ ಇವರ ಬೈಕನ್ನು ಹಿಂಬಾಲಿಸಿ ಓಡಿಸಿಕೊಂಡು ಬಂದಿದ್ದಾರೆ. ಈ ವೇಳೆ ಸವಾರರು ಬೈಕಿನ ವೇಗವನ್ನು ಹೆಚ್ಚಿಸಿ ತಪ್ಪಿಸಿಕೊಂಡು ಬಂದಿದ್ದಾರೆ.
ಬಳಿಕ ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಜತೆಗೆ ಕಳೆದ ವಾರ ಅದೇ ಸ್ಥಳದಲ್ಲಿ ನಡೆದ ಕೊಲೆ ಯತ್ನ ಪ್ರಕರಣ ಹಾಗೂ ಬಕ್ರೀದ್ ಸಂದರ್ಭದಲ್ಲಿ ಹಸುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






