ಸಮಗ್ರ ನ್ಯೂಸ್: ನೈಋತ್ಯ ರೈಲ್ವೆಯು ಮಂಗಳೂರು ಸೆಂಟ್ರಲ್- ವಿಜಯಪುರ ವಿಶೇಷ ರೈಲಿನ (ಸಂಖ್ಯೆ 07378) ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದ್ದು, ಜುಲೈ 1, 2025ರಿಂದ ಜಾರಿಗೆ ಬರಲಿದೆ.
ಪ್ರಸ್ತುತ ಈ ರೈಲು ಮಧ್ಯಾಹ್ನ 2:35ಕ್ಕೆ ಮಂಗಳೂರು ಸೆಂಟ್ರಲ್ನಿಂದ ಹೊರಟು ಮರುದಿನ ಬೆಳಗ್ಗೆ 9:35ಕ್ಕೆ ವಿಜಯಪುರ ತಲುಪುತ್ತದೆ. ಆದರೆ, ಜುಲೈ 1ರಿಂದ ರೈಲು ಸಂಜೆ 4:45ಕ್ಕೆ ಮಂಗಳೂರು ಸೆಂಟ್ರಲ್ನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 11:15ಕ್ಕೆ ವಿಜಯಪುರ ತಲುಪಲಿದೆ.
ಕೋವಿಡ್ ಪೂರ್ವದಲ್ಲಿ ಈ ರೈಲು ಸಂಜೆ 4:30ಕ್ಕೆ ಹೊರಡುತ್ತಿತ್ತು. ನಂತರ ಮಧ್ಯಾಹ್ನ 2:35ಕ್ಕೆ ಬದಲಾಯಿಸಲಾಗಿತ್ತು. ರೈಲು ಪ್ರಯಾಣಿಕರು, ರೈಲು ಹೋರಾಟಗಾರರು ಹಾಗೂ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಂಜೆಯ ಸಮಯವನ್ನು ಮರುಸ್ಥಾಪಿಸುವಂತೆ ರೈಲ್ವೆಗೆ ಮನವಿ ಮಾಡಿದ್ದರು. ಈ ಬೇಡಿಕೆಗೆ ಸ್ಪಂದಿಸಿ, ರೈಲ್ವೆ ಇದೀಗ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ.
ಪರಿಷ್ಕೃತ ವೇಳಾಪಟ್ಟಿ ವಿವರ:
ರೈಲು ಸಂಜೆ 4:45ಕ್ಕೆ ಮಂಗಳೂರು ಸೆಂಟ್ರಲ್ನಿಂದ ಹೊರಟು, ಕಬಕ ಪುತ್ತೂರು (6:00 PM), ಸುಬ್ರಹ್ಮಣ್ಯ ರೋಡ್ (6:50 PM), ಸಕಲೇಶಪುರ, ಹಾಸನ, ಅರಸೀಕೆರೆ, ಕಡೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಹುಬ್ಬಳ್ಳಿ ಜಂಕ್ಷನ್, ಗದಗ ಜಂಕ್ಷನ್, ಬಾದಾಮಿ, ಬಾಗಲಕೋಟೆ ಮೂಲಕ ವಿಜಯಪುರಕ್ಕೆ ತಲುಪಲಿದೆ.