ಹಾಳೆತಟ್ಟೆ ಆಮದು ನಿಷೇಧಿಸಿದ ಅಮೇರಿಕಾ| ಕೋರ್ಟ್ ಮೆಟ್ಟಿಲೇರಲು ಸಜ್ಜಾದ ಹಾಳೆ ತಟ್ಟೆ ಉತ್ಪಾದಕರು

ಸಮಗ್ರ ನ್ಯೂಸ್: ಅಡಿಕೆ ಹಾಳೆ ತಟ್ಟೆ ಉತ್ಪಾದನೆಯನ್ನು ಉದ್ಯಮವಾಗಿ ರೂಪಿಸಿಕೊಂಡಿರುವ ದ.ಕ ಜಿಲ್ಲೆಯ ಹಲವಾರು ಸಂಸ್ಥೆಗಳು ಎರಡು ವಾರಗಳಿಂದ ಉತ್ಪಾದನೆಯನ್ನು ಶೇ 50ರಷ್ಟು ಇಳಿಕೆ ಮಾಡಿವೆ. ‘ಅಡಿಕೆ ಹಾಳೆಯಲ್ಲಿ ನೈಸರ್ಗಿಕವಾಗಿ ಇರುವ ವಿಷಕಾರಿ ಅಂಶದಿಂದ ಕ್ಯಾನ್ಸರ್‌ ಬರುತ್ತದೆ.ಅದಕ್ಕಾಗಿ ಅವುಗಳನ್ನು ಬಳಸಬೇಡಿ’ ಎಂದು ಅಮೆರಿಕದ ಆಹಾರ ಮತ್ತು ಔಷಧ ವ್ಯವಹಾರಗಳ ಸಚಿವಾಲಯವು ಮೂರು ವಾರಗಳ ಹಿಂದೆ ಸುತ್ತೋಲೆ ಹೊರಡಿಸಿತ್ತು‌. ಈ ಸುತ್ತೋಲೆ ಬೆನ್ನಲ್ಲೇ ಅಡಿಕೆ ಹಾಳೆಯಿಂದ ತಯಾರಿಸುವ ತಟ್ಟೆ, ಲೋಟಗಳ ರಫ್ತು ನಿಷೇಧಗೊಂಡಿದೆ.

Ad Widget . Ad Widget . Ad Widget .

ಅಮೇರಿಕಾದ ಈ ನಿರ್ಧಾರದಿಂದ ಸ್ಥಳೀಯ ಉದ್ಯಮದ ಮೇಲೆ ನೇರ ಪರಿಣಾಮ ಬೀರಿದ್ದು, ಹಾಳೆ ತಟ್ಟೆ ಉತ್ಪಾದಕ ಸಂಸ್ಥೆಗಳು ನಷ್ಟ ಅನುಭವಿಸುತ್ತಿವೆ. ಉತ್ಪಾದನೆ ಇಳಿಮುಖವಾಗಿರುವ ಕಾರಣ ಕೆಲಸಗಾರರೂ ಕೆಲಸ ‌ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ‌.

Ad Widget . Ad Widget .

‘ರಾಜ್ಯದ ದಕ್ಷಿಣ ಕನ್ನಡ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಂದ ಅಡಿಕೆ ಹಾಳೆ ತಟ್ಟೆಗಳು ಅಮೆರಿಕ, ಯುರೋಪ್ ದೇಶಗಳಿಗೆ ರಫ್ತಾಗುತ್ತಿದ್ದವು. ಅವುಗಳಲ್ಲಿ ದೊಡ್ಡ ಖರೀದಿದಾರ ಅಮೆರಿಕ, ಈಗ ಭಾರತದ ಹಾಳೆ ತಟ್ಟೆ ನಿಷೇಧಿಸಿದೆ. ತಿಂಗಳಿಗೆ ಉತ್ಪಾದನೆ ಆಗುತ್ತಿದ್ದ 25 ಲಕ್ಷದಷ್ಟು ಹಾಳೆ ತಟ್ಟೆಗಳಲ್ಲಿ 12 ಲಕ್ಷಕ್ಕೂ ಅಧಿಕ ಹಾಳೆ ತಟ್ಟೆಗಳು ಅಮೆರಿಕಕ್ಕೆ ರವಾನೆಯಾಗುತ್ತಿದ್ದವು. ಅಲ್ಲಿ ನಿಷೇಧ ವಿಧಿಸಿದ ಮೇಲೆ ಶೇ 50ರಷ್ಟು ಉತ್ಪಾದನೆ ನಿಲ್ಲಿಸಿದ್ದೇವೆ’ ಎನ್ನುತ್ತಾರೆ ಜಿಲ್ಲೆಯಿಂದ ಅತಿಹೆಚ್ಚು ಹಾಳೆ ತಟ್ಟೆ ರಫ್ತು ಮಾಡುತ್ತಿರುವ ಬೆಳ್ತಂಗಡಿ ತಾಲ್ಲೂಕು ನಿಡ್ಲೆಯ ಅಗ್ರಿಲೀಫ್ ಎಕ್ಸ್‌ಪೋರ್ಟ್‌ ಪ್ರೈವೆಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಅವಿನಾಶ್ ರಾವ್.

ಭಾರತದ ಹಾಳೆ ತಟ್ಟೆ ಖರೀದಿಸುವ ಅಮೆರಿಕದ ಸಂಸ್ಥೆಗಳು ಈ ಸಂಬಂಧ ವಕೀಲರನ್ನು ನೇಮಿಸಿ, ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧತೆ ನಡೆಸಿವೆ. ಅದಕ್ಕೆ ಅಗತ್ಯವಿರುವ ಪರೀಕ್ಷಾ ವರದಿಗಳು, ಸಿಎಫ್‌ಟಿಆರ್‌ಐ, ಅನೇಕ ಸಂಸ್ಥೆಗಳು ನಡೆಸಿರುವ ಸಂಶೋಧನಾ ಪ್ರಬಂಧಗಳು ಹಾಗೂ ಪೂರಕ ಎಲ್ಲ ದಾಖಲೆಗಳನ್ನು ನಾವು ಅವರಿಗೆ ಒದಗಿಸಲಿದ್ದೇವೆ. ಹಾಳೆ ತಟ್ಟೆ ಉತ್ಪಾದಕ ಸಂಸ್ಥೆಗಳ ಪ್ರಮುಖರು ತಂಡ ರಚಿಸಿಕೊಂಡು ಈ ಕಾರ್ಯದಲ್ಲಿ ನಿರತರಾಗಿದ್ದೇವೆ ಎಂದು ಅವಿನಾಶ್ ರಾವ್ ಮಾದ್ಯಮವೊಂದಕ್ಕೆ ತಿಳಿಸಿದ್ದಾರೆ.

ಹಾಳೆ ತಟ್ಟೆ ಉದ್ಯಮ ನಡೆಸುವ ರೈತರ ಹಿತಕಾಪಾಡುವ ದೃಷ್ಟಿಯಿಂದ ಮಧ್ಯ ಪ್ರವೇಶಿಸುವಂತೆ ಕೇಂದ್ರ ಕೈಗಾರಿಕಾ ಮತ್ತು ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಅವರಿಗೆ ಪತ್ರ ಬರೆಯಲಾಗಿದೆ. ಅಮೆರಿಕವು ಅಡಿಕೆ ಹಾಳೆ ತಟ್ಟೆ ನಿಷೇಧಿಸಿದ ಕಾರಣ ದೇಶದಲ್ಲಿರುವ ಈ ಉದ್ಯಮವು ₹250 ಕೋಟಿಯಷ್ಟು ನಷ್ಟ ಅನುಭವಿಸುತ್ತಿದೆ. ಮುಂದಿನ ದಿನಗಳಲ್ಲಿ ಇತರೆ ದೇಶಗಳು ಅದರಲ್ಲೂ ಯುರೋಪ್ ಇದೇ ನಿಲುವನ್ನು ತಳೆದರೆ ನಷ್ಟದ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರವು ರಾಜತಾಂತ್ರಿಕ ಚರ್ಚೆ ಮೂಲಕ ದೇಶದ ಉದ್ದಿಮೆಗಳ ಹಿತ ಕಾಪಾಡಬೇಕು ಎಂದು ಸಚಿವರನ್ನು ವಿನಂತಿಸಲಾಗಿದೆ

Leave a Comment

Your email address will not be published. Required fields are marked *