ಸಮಗ್ರ ನ್ಯೂಸ್: ಬೇಸಿಗೆ ರಜೆ ಮುಗಿದು ಇಂದಿನಿಂದ ಶಾಲೆಗಳು ಪುನರಾರಂಭವಾಗುತ್ತಿದೆ. ಈ ಸಲುವಾಗಿ ಶಿಕ್ಷಕರು, ಮುಖ್ಯಶಿಕ್ಷಕರು ಮತ್ತು ಇತರೆ ಸಿಬ್ಬಂದಿ ಇಂದುರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಹಾಜರಾಗಬೇಕು. ಶಾಲಾ ಆವರಣ, ಕೊಠಡಿಗಳು, ಶೌಚಾಲಯ, ಮೇಲ್ಚಾವಣಿ ಹಾಗೂ ಬಿಸಿಯೂಟದ ಪರಿಕರಗಳನ್ನು ಸ್ವಚ್ಛಗೊಳಿಸಬೇಕು. ತಳಿರು ತೋರಣ, ರಂಗೋಲಿ ಬಿಡಿಸಿ ಶಾಲೆಗಳನ್ನು ಅಲಂಕರಿಸಬೇಕು. ಮೇ 30ರಂದು ಮಕ್ಕಳನ್ನು ಸ್ವಾಗತಿಸಲು ಎಲ್ಲ ಶಾಲೆಗಳು ಸಜ್ಜುಗೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ.
ಬಿಸಿಯೂಟಕ್ಕೆ ಅಗತ್ಯವಾದ ಪಡಿತರ, ಬೇಳೆ, ತರಕಾರಿ, ಮೊಟ್ಟೆ ತಂದಿಟ್ಟುಕೊಳ್ಳಬೇಕು. ಶುದ್ಧ ಕುಡಿಯುವ ನೀರು ಸಂಗ್ರಹಿಸಬೇಕು. ಅಡುಗೆ ಸಿಬ್ಬಂದಿ, ಸಹಾಯಕ ಆರೋಗ್ಯ ತಪಾಸಣೆ ನಡೆಸಬೇಕು. ಸಿಹಿಯೂಟದ ಜತೆಗೆ ಮೊದಲ ದಿನವೇ ಬೇಯಿಸಿದ ಮೊಟ್ಟೆ ವಿತರಣೆ ಮಾಡಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.
ಬೆಂಗಳೂರಿನ ಆಡುಗೋಡಿಯ ಪಟೇಲ್ ಮುನಿ ಚಿನ್ನಪ್ಪ ಪ್ರೌಢಶಾಲೆ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗ್ಗೆ 9 ಗಂಟೆಗೆ ಶಾಲಾ ಪ್ರಾರಂಭೋತ್ಸವ ಉದ್ಘಾಟಿಸಲಿದ್ದಾರೆ.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ 2025-26ನೇ ಸಾಲಿನ ಶೈಕ್ಷಣಿಕ ಅವಧಿಯು ದಿನಾಂಕ: 29.05.2025 ರಂದು ಪ್ರಾರಂಭವಾಗಲಿದ್ದು ಇದರ ಅಂಗವಾಗಿ ಶಾಲಾ ಪ್ರಾರಂಭೋತ್ಸವ 2025-26ನ್ನು ಹಮ್ಮಿಕೊಳ್ಳಲಾಗುತ್ತಿದ್ದು ಈ ಕುರಿತು ರಾಜ್ಯ ಮಟ್ಟದ ಕಾರ್ಯಕ್ರಮವನ್ನು ದಿನಾಂಕ: 29.05.2025 ರಂದು ಕರ್ನಾಟಕ ಪಬ್ಲಿಕ್ ಶಾಲೆ, ಪಟೇಲ್ ಮುನಿಚಿನ್ನಪ್ಪ ಪ್ರೌಢಶಾಲೆ, ಹೊಸೂರು ರಸ್ತೆ, ಅಯ್ಯಪ್ಪ ಗಾರ್ಡನ್, ಆಡುಗೋಡಿ, ಬೆಂಗಳೂರು ಇಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ.
ಸದರಿ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ.2025 ನೇ ಮಾರ್ಚ್ /ಏಪ್ರಿಲ್ ರಲ್ಲಿ ನಡೆದ ಪ್ರಥಮ ಪರೀಕ್ಷೆಯಲ್ಲಿ 625 ಅಂಕಗಳಿಗೆ 625 ಅಂಕಗಳನ್ನು ಪಡೆದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆ ಮಕ್ಕಳನ್ನು ಸನ್ಮಾನಿಸಲಿದ್ದಾರೆ.
ಎಸ್.ಎಸ್.ಎಲ್.ಸಿ.2025 ನೇ ಮಾರ್ಚ್ /ಏಪ್ರಿಲ್ ನಲ್ಲಿ ನಡೆದ ಪ್ರಥಮ ಪರೀಕ್ಷೆಯಲ್ಲಿ 625 ಅಂಕಗಳಿಗೆ 625 ಅಂಕಗಳನ್ನು ಪಡೆದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳ ಮಕ್ಕಳ ಪಟ್ಟಿಯನ್ನು ಈ ಪತ್ರದೊಂದಿಗೆ ಅನುಬಂಧಿಸಿದೆ.
ಪಟ್ಟಿಯಲ್ಲಿರುವ 625 ಕ್ಕೆ 625 ಅಂಕ ಪಡೆದ ವಿದ್ಯಾರ್ಥಿಗಳು, ಕರ್ನಾಟಕ ಪಬ್ಲಿಕ್ ಶಾಲೆ, ಪಟೇಲ್ ಮುನಿಚಿನ್ನಪ್ಪ ಪ್ರೌಢಶಾಲೆ, ಹೊಸೂರು ರಸ್ತೆ, ಅಯ್ಯಪ್ಪ ಗಾರ್ಡನ್, ಆಡುಗೋಡಿ, ಬೆಂಗಳೂರು ಇಲ್ಲಿ ನಿಗದಿತ ಸಮಯ ಬೆಳಿಗ್ಗೆ 9.00 ಗಂಟೆಗೆ ಸದರಿ ಕಾರ್ಯಕ್ರಮಕ್ಕೆ ಹಾಜರಾಗುವುದು.
ಸದರಿ ಕಾರ್ಯಕ್ರಮದಲ್ಲಿ ನಿಗದಿತ ಸಮಯದಲ್ಲಿ ಸದರಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹಾಜರುಪಡಿಸಿ ಮರಳಿ ಸುರಕ್ಷಿತವಾಗಿ ಮೂಲಸ್ಥಳಕ್ಕೆ ತಲುಪಿಸಲು ಸಂಬಂಧಿಸಿದ ಶಾಲೆಯ ಶಿಕ್ಷಕರು/ಪೋಷಕರೊಡನೆ ಕಳುಹಿಸಲು ಕ್ರಮವಹಿಸಲು ಸಂಬಂಧಿಸಿದ ಶಾಲಾ ಮುಖ್ಯಶಿಕ್ಷಕರಿಗೆ/ಆಡಳಿತ ಮಂಡಳಿಗೆ ತಿಳಿಸಲು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡುವುದು.
ಸದರಿ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಹಾಜರಾಗುವುದಕ್ಕೆ ಸಂಬಂಧಿಸಿದಂತೆ ಅರ್ಹ ಪ್ರಯಾಣದ ವೆಚ್ಚವನ್ನು ಶಾಲಾ ಸಂಚಿತ ನಿಧಿಯಿಂದ/ಸಂಬಂಧಿಸಿದ ಶಾಲಾ ಆಡಳಿತ ಮಂಡಳಿಯಿಂದ ಭರಿಸಲು ತಿಳಿಸುವುದು.
