ಸಮಗ್ರ ನ್ಯೂಸ್: ಸುಹಾಸ್ ಶೆಟ್ಟಿ ಒಬ್ಬ ರೌಡಿಶೀಟರ್ ಆಗಿದ್ದ. ಎರಡು ಕೊಲೆ ಆರೋಪದಲ್ಲಿ ಭಾಗಿಯಾಗಿದ್ದ. ಅಂಥವನ ಕೊಲೆಯಾಗಿದೆ. ಇದಕ್ಕೆ ಪ್ರತೀಕಾರ ಎಂಬಂತೆ ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಕೊಲೆಯಾಗಿದೆ, ಮತ್ತೋರ್ವನಿಗೆ ಗಾಯಗಳಾಗಿವೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಂತಹ ಪ್ರತೀಕಾರ ನಡೆದರೆ ಬದುಕುವುದು ಕಷ್ಟವಾಗುತ್ತದೆ. ಪೊಲೀಸರಿಗೆ ಕೊಲೆ ಆರೋಪಿಗಳ ಪ್ರಾಥಮಿಕ ಸುಳಿವು ಸಿಕ್ಕಿದೆ. ಶೀಘ್ರದಲ್ಲೇ ಬಂ ಧಿಸುತ್ತಾರೆ. ಪೊಲೀಸರ ತನಿಖೆಯ ಅನಂತರವೇ ಎಲ್ಲವೂ ತಿಳಿಯಲಿದೆ. ದ.ಕ. ಜಿಲ್ಲೆಯಲ್ಲಿ ಕೋಮುವಾದದ ಕೆಟ್ಟ ವಾತಾವರಣ ನಿರ್ಮಾಣವಾಗಿದೆ. ಅದರ ಫಲಶೃತಿಯೇ ಈ ಘಟನೆ ಎಂದರು.
ಅಮಾನವೀಯವಾಗಿ, ಬರ್ಬರವಾಗಿ ಹತ್ಯೆ ಮಾಡಿರುವುದು ಇಡೀ ಸಮಾಜಕ್ಕೆ ಕೆಟ್ಟ ಸಂದೇಶ. ಎಲ್ಲ ರೀತಿಯ ಕಟ್ಟೆಚ್ಚರವನ್ನು ಪೊಲೀಸರು ವಹಿಸಿದ್ದಾರೆ. ಬಿಜೆಪಿಯವರ ರೀತಿ ನಾವು ಪ್ರಚೋದನಾಕಾರಿಯಾಗಿ ಮಾತನಾಡುವುದಿಲ್ಲ. ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರು ಶವ ಸಿಕ್ಕರೂ ಅದರ ಮೇಲೆ ರಾಜಕೀಯ ಮಾಡುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಟ್ಟ ವ್ಯವಸ್ಥೆ ನಿರ್ಮಾಣ ಆಗೋಕೆ ಬಿಜೆಪಿ ಹಾಗೂ ಸಂಘ ಪರಿವಾರದ ಸಂಘಟನೆಗಳೇ ಕಾರಣ ಎಂದರು.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಎಲ್ಲರನ್ನೂ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಎಲ್ಲರನ್ನೂ ಬಂಧಿಸುತ್ತೇವೆ. ಕಾನೂನು ಉಲ್ಲಂಘನೆ ಆದಾಗ ಕ್ರಮ ಆಗುತ್ತದೆ. ಯಾರೇ ಹತ್ಯೆ ಆದರೂ ಧರ್ಮ, ಜಾತಿ ಪ್ರಶ್ನೆ ಬರುವುದಿಲ್ಲ. ತಪ್ಪು ಮಾಡಿದ್ದರೆ ಶಿಕ್ಷೆ ಆಗುತ್ತದೆ. ನಮ್ಮಲ್ಲಿ ಯಾವುದೇ ಭೇದ ಭಾವ ಇಲ್ಲ. ಕ್ರಮ ಆಗುತ್ತದೆ. ಮುಸಲ್ಮಾನರು ಎಂದರೆ ಕೆಟ್ಟ ಅಭಿಪ್ರಾಯವನ್ನು ಬಿಜೆಪಿಯವರು ಇಟ್ಟುಕೊಂಡಿದ್ದಾರೆ. ಬಿಜೆಪಿ ನಾಯಕರ ಹೇಳಿಕೆಗಳನ್ನು ನೋಡಿದರೆ ತರ್ಕ, ನ್ಯಾಯ, ಮಾನವೀಯತೆ, ಮನುಷ್ಯತ್ವ ಯಾವುದೂ ಇಲ್ಲ. ವಿಷ, ಕೊಳಕು ತುಂಬಿದ ಮನಸುಗಳು ಎಂದರು.