ಸಮಗ್ರ ನ್ಯೂಸ್: ಎಡೆ ಬಿಡದೆ ಸುರಿದ ಭಾರೀ ರಣ ಮಳೆಗೆ ಮಂಗಳೂರಿನ ರಸ್ತೆಗಳಲ್ಲಿ ಜಲಪ್ರವಾಹ ಉಂಟಾಗಿದೆ. ಮಂಗಳೂರು ನಗರದ ಹಲವು ಜನ ವಸತಿ ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದು ರಾಜಕಾಲುವೆ ತುಂಬಿದ ಹಿನ್ನೆಲೆ ಮತ್ತೊಮ್ಮೆ ಪಂಪವೆಲ್ಲ್ ಜಲಾವೃತವಾಗಿದೆ.
ರಸ್ತೆಗಳಲ್ಲಿ ನದಿಗಳ ಮಾದರಿಯಲ್ಲಿ ಮಳೆ ನೀರು ಭಾರೀ ಉಕ್ಕಿ ಬರುತ್ತಿದ್ದು ಮಂಗಳೂರಿನ ಕೊಡಿಯಾಲ್ ಬೈಲ್ ಭಗವತೀ ನಗರ ಬಳಿ ಅವಾಂತರ ಸೃಷ್ಟಿಯಾಗಿದೆ. ರಾಜಕಾಲುವೆ ಉಕ್ಕಿ ಹರಿದ ಪರಿಣಾಮ ರಸ್ತೆಯಲ್ಲಿ ಜಲ ಪ್ರವಾಹ ಉಂಟಾಗಿದ್ದು ಕಾರು, ಬೈಕ್ ಗಳು ಸಂಚರಿಸಲು ಸಾಧ್ಯವಾಗಲೇ ವಾಹನ ಸವಾರರ ಪರದಾಟ ನಡೆಸಿದ್ದಾರೆ. ಇಡೀ ರಸ್ತೆಯಲ್ಲಿ ಭಾರೀ ಪ್ರಮಾಣದ ನೀರು ಹರಿದು ಮನೆಗಳಿಗೆ ನುಗ್ಗಿ ಹಾನಿಯಾಗಿದ್ದು ರಸ್ತೆಗಳ ಸಂಪರ್ಕ ಕಡಿದುಕೊಂಡಿದೆ.
ಜಿಲ್ಲೆಯಲ್ಲಿ ತೀವ್ರ ಮಳೆ ಹಿನ್ನೆಲೆ ದ.ಕ. ಜಿಲ್ಲೆಯ ಎಲ್ಲ ಅಂಗನವಾಡಿಗಳಿಗೆ ಇಂದು ರಜೆ ಘೋಷಿಸಲಾಗಿದೆ. ಮುಂದಿನ 3 ಗಂಟೆಗಳಲ್ಲಿ ದಕ್ಷಿಣ ಕನ್ನಡ ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಬಲವಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.