ಸಮಗ್ರ ನ್ಯೂಸ್: ಮುಂಗಾರು ಮಾರುತಗಳು ಮೇ 27ರಂದು ಕೇರಳ ಪ್ರವೇಶಿಸಲಿವೆ. ಈಗಾಗಲೇ ಮುಂಗಾರು ಮಾರುತಗಳು ಅಂಡಮಾನ್ ಹಾಗೂ ನಿಕೋಬರ್ ದ್ವೀಪ ಪ್ರವೇಶಿಸಿದ್ದು, ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ 48 ಗಂಟೆಗಳ ಅವಧಿಯಲ್ಲಿ ಬಂಗಾಳ ಕೊಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಗಾಳಿಯ ವೇಗ ಹೆಚ್ಚಿದೆ. ಜತೆಗೆ ಮುಂದಿನ 3ರಿಂದ 4 ದಿನಗಳಲ್ಲಿ ಮಾರುತಗಳು ದಕ್ಷಿಣ ಅರೇಬಿಯನ್ ಸಮುದ್ರ, ಮಾಲ್ಡೀವ್ಸ್ ಮತ್ತು ಕೊಮೊರಿನ್, ದಕ್ಷಿಣ ಬಂಗಾಳ ಕೊಲ್ಲಿಯ ಬಹುತೇಕ ಪ್ರದೇಶಗಳು, ಮಧ್ಯ ಬಂಗಾಳಕೊಲ್ಲಿಯ ಕೆಲವು ಭಾಗಗಳಿಗೆ ಪ್ರವೇಶಿಸಲಿವೆ ಎಂದು ಹೇಳಿದೆ.
ಸಾಮಾನ್ಯವಾಗಿ ಜೂನ್ 1ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶಿಸಿ, ಜುಲೈ 8ಕ್ಕೆ ದೇಶವ್ಯಾಪಿ ಪಸರಿಸಲಿದೆ. ಆದೆ, ಈ ಬಾರಿ ಮೇ 27ಕ್ಕೆ ಕೇರಳ ಪ್ರವೇಶಿಸಲಿದ್ದು, ರಾಜ್ಯದಲ್ಲೂ ಮುಂಗಾರು ಅಧಿಕೃತವಾಗಿ ಆರಂಭವಾಗಲಿದೆ. ಕಳೆದ 16 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮುಂಗಾರು ಮಾರುತಗಳು ಅವಧಿಗೂ ಮುನ್ನವೇ ಪ್ರವೇಶಿಸುತ್ತಿವೆ. ಪ್ರಸ್ತುತ, ಮುಂಗಾರು ಹಂಗಾಮಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಹವಾಮಾನ ಇಲಾಖೆ ಸೂಚಿಸಿದೆ.
ರಾಜ್ಯದಲ್ಲಿ ಮಂಗಳವಾರ (ಮೇ13) ಮಳೆ ಸಂಬಂಧಿತ ಅವಗಢಗಳಲ್ಲಿ ಒಟ್ಟು ಎಂಟು ಮಂದಿ ಮೃತಪಟ್ಟಿದ್ದಾರೆ. ಕೊಪ್ಪಳ ಹಾಗೂ ಬಳ್ಳಾರಿಯಲ್ಲಿ ತಲಾ ಇಬ್ಬರು, ಚಿಕ್ಕಮಗಳೂರು, ವಿಜಯಪುರದಲ್ಲಿ ತಲಾ ಒಬ್ಬರು ಸಿಡಿಲಿಗೆ ಬಲಿಯಾದರೆ, ಗದಗ ಹಾಗೂ ಗೋಕಾಕ್ನಲ್ಲಿ ತಲಾ ಒಬ್ಬರು ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದ್ದರು.