ಸಮಗ್ರ ನ್ಯೂಸ್: ಮಂಡ್ಯ ಕೆಆರ್ ಪೇಟೆ ಮೂಲದ ಉದ್ಯಮಿ ಹರ್ಷವರ್ಧನ ಕಿಕ್ಕೇರಿ (57) ಅಮೆರಿಕದ ವಾಷಿಂಗ್ಟನ್ ಸಮೀಪದ ನ್ಯೂ ಕ್ಯಾಸೆಲ್ ನಗರದ ತಮ್ಮ ನಿವಾಸದಲ್ಲಿ ಪತ್ನಿ ಶ್ವೇತಾ ಹಾಗೂ ಪುತ್ರನಿಗೆ ಗುಂಡಿಕ್ಕಿ, ಬಳಿಕ ಆತ್ಮಹತ್ಯೆ ಮಾಡಿಕೊಂಡ ಕಳವಳಕಾರಿ ಘಟನೆ ವರದಿಯಾಗಿದೆ.
ಅಮೆರಿಕ ಕಾಲಮಾನ ಪ್ರಕಾರ ಗುರುವಾರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಅಲ್ಲಿನ ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್, ಸ್ಟಾರ್ ಆಫ್ ಮೈಸೂರು ವರದಿಗಳು ಹೇಳಿವೆ. 7 ವರ್ಷದ ಮತ್ತೊಬ್ಬ ಪುತ್ರ ಮನೆಯ ಹೊರಗೆ ಇದ್ದುದರಿಂದ ಪಾರಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಭಾಷಾತಜ್ಞ ಕಿಕ್ಕೇರಿ ನಾರಾಯಣ್ ಅವರ ಪುತ್ರ ಹರ್ಷವರ್ಧನ ಅವರ ತಾಯಿ ಗಿರಿಜಾ ನಾರಾಯಣ್. ಸಹೋದರ ಚೇತನ್. ಭಾಷಾತಜ್ಞ ಕಿಕ್ಕೇರಿ ನಾರಾಯಣ್ 2017ರಲ್ಲಿ ಮೃತಪಟ್ಟಿದ್ದರು. ಈಗ ತಾಯಿ ಗಿರಿಜಾ ಚೇತನ್ ಅವರೊಂದಿಗೆ ಮೈಸೂರು ವಿಜಯನಗರದಲ್ಲಿ ವಾಸವಿದ್ದಾರೆ. ಹರ್ಷವರ್ಧನ ಹಾಗೂ ಚೇತನ್ ಇಬ್ಬರೂ ಚೆಸ್ ಆಟಗಾರರಾಗಿದ್ದರು. ಮಂಡ್ಯದ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಮೂಲದವರಾದ ಹರ್ಷವರ್ಧನ್, ಮೈಸೂರು ನಗರದ ಎಸ್ಜೆಸಿಇ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ನಂತರ ಮೈಕ್ರೋಸಾಫ್ಟ್ ಉದ್ಯೋಗಿಯಾಗಿದ್ದರು.
ರೊಬೋಟಿಕ್ಸ್ ವಿಚಾರದಲ್ಲಿ ಪರಿಣತಿ ಹೊಂದಿದ್ದ ಹರ್ಷವರ್ಧನ ಕಿಕ್ಕೇರಿ ಅವರು ಕರ್ನಾಟಕದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ನವೋದ್ಯಮ ಸ್ಥಾಪಿಸಲು ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಿದ್ದರು. ಮೈಸೂರು ನಗರದ ಎನ್ಐಇ, ಎಸ್ಜೆಸಿಇ ಕಾಲೇಜುಗಳು ಹಾಗೂ ಸಿಎಫ್ಟಿಆರ್ಐ ಕಾರ್ಯಕ್ರಮ, ತಂತ್ರಜ್ಞಾನ ಸಮಾವೇಶಗಳಲ್ಲಿ ಕೂಡ ಅವರು ಪಾಲ್ಗೊಂಡಿದ್ದರು.
ಮಂಡ್ಯದ ಎಸ್ಜೆಸಿಇ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ನಂತರ ಮೈಕ್ರೋಸಾಫ್ಟ್ ಉದ್ಯೋಗಿಯಾಗಿದ್ದರು. ನಂತರ ರೋಬೊಟಿಕ್ ತಂತ್ರಜ್ಞಾನ ಆಧಾರಿತ ‘ಹೋಲೊವರ್ಲ್ಡ್’ ಹಾಗೂ ‘ಹೋಲೊಸ್ಯೂಟ್’ ಕಂಪನಿಗಳನ್ನು ಸ್ಥಾಪಿಸಿದ್ದರು.
ಅವರು ‘ಹೋಲೊವರ್ಲ್ಡ್’ ಕಂಪನಿಯ ಸಿಇಒ ಮತ್ತು ಸಿಟಿಒ ಆಗಿದ್ದರೆ, ಪತ್ನಿ ಶ್ವೇತಾ ಅಧ್ಯಕ್ಷರಾಗಿದ್ದರು. ಕಂಪನಿಯ ಉತ್ಪನ್ನಗಳಿಗೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ರಾಯಭಾರಿ ಆಗಿದ್ದರು. ಗಡಿಯಲ್ಲಿ ಯೋಧರಂತೆ ಕಾವಲು ಕಾಯುವ ರೋಬೊಟ್ಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹರ್ಷ ಮಾತುಕತೆ ನಡೆಸಿದ್ದರು. ವಿಶ್ವಸಂಸ್ಥೆಯ ‘ನೊವುಸ್’ ಸಮ್ಮೇಳನದಲ್ಲಿ ಕಂಪನಿಗೆ ‘ಸುಸ್ಥಿರ ತಂತ್ರಜ್ಞಾನ ಕಂಪನಿ’ ಎಂಬ ಶ್ರೇಯ ಸಿಕ್ಕಿತ್ತು.