ಸಮಗ್ರ ನ್ಯೂಸ್: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ವೇಳೆ ಸಭೆಯಲ್ಲಿ ಕುಳಿತು ಯಕ್ಷಗಾನ ವೀಕ್ಷಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಹಠಾತ್ ರಂಗಸ್ಥಳಕ್ಕೆ ನುಗ್ಗಿ ಬಂದು ವೇಷಧಾರಿಯ ಕುತ್ತಿಗೆ ಹಿಡಿದು ಗೊಂದಲ ಸೃಷ್ಟಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ನಂದುಗುರಿಯಲ್ಲಿ ನಡೆದಿದೆ.
ಕಡಬದ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ನಂದುಗುರಿ ಅವರ ಮನೆಯಲ್ಲಿ ರಾತ್ರಿ ವೇಳೆ ಸೇವಾರ್ಥವಾಗಿ ಕಟೀಲು ಮೇಳದವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ವೇಳೆ ಘಟನೆ ಸಂಭವಿಸಿದೆ.
ರಂಗಸ್ಥಳದ ಮೇಲೆ ವಿದ್ಯುನ್ಮಾಲಿ ಮತ್ತು ಧಿತಿ ಪಾತ್ರಧಾರಿಗಳ ನಡುವೆ ಸಂಭಾಷಣೆ ನಡೆಯುತ್ತಿದ್ದ ವೇಳೆ ಯಕ್ಷಗಾನ ವೀಕ್ಷಿಸುತ್ತಿದ್ದ ಕಡಬದ ಕಳಾರ ಸಮೀಪದ ನಿವಾಸಿ ರಾಧಾಕೃಷ್ಣ ಎಂಬಾತ ಮೈಮೇಲೆ ಆವೇಶ ಬಂದ ರೀತಿಯಲ್ಲಿ ಹಠಾತ್ ಆಗಿ ರಂಗಸ್ಥಳದ ಮೇಲೇರಿ ವಿದ್ಯುನ್ಮಾಲಿ ಪಾತ್ರಧಾರಿಯ ಮೇಲೆರಗಿ ಕುತ್ತಿಗೆ ಹಿಡಿದಿದ್ದಾನೆ.
ಈ ಅನಿರೀಕ್ಷಿತ ಘಟನೆಯಿಂದ ದಿಗ್ಭ್ರಮೆಗೊಳಗಾದ ಕಲಾವಿದರು ಹಾಗೂ ಹಿಮ್ಮೇಳದವರು ಆತನನ್ನು ಹಿಡಿದುಕೊಂಡು ರಂಗಸ್ಥಳದಿಂದ ಹೊರಗೊಯ್ದರು. ರಂಗಸ್ಥಳದ ಹೊರಗೆ ಆತನನ್ನು ಹಿಡಿದಿಟ್ಟುಕೊಂಡಿದ್ದಾಗ ಆತ ಆವೇಶ ಕಡಿಮೆಯಾಗಲು ತೀರ್ಥ ಪ್ರೋಕ್ಷಣೆ ಮಾಡಲು ಬಂದ ಅರ್ಚಕರ ಮೇಲೇರಗಲು ಹೋದ ಘಟನೆಯೂ ನಡೆಯಿತು.
ಬಳಿಕ ಜನರು ಸೇರಿಕೊಂಡು ಆತನನ್ನು ವಾಹನದಲ್ಲಿ ಕುಳ್ಳಿರಿಸಿ ಸುಮಾರು ೩ ಕಿ.ಮೀ. ದೂರದ ಆತನ ಮನೆಗೆ ಬಿಟ್ಟು ಬಂದರು. ಆದರೆ ಅಲ್ಲಿಂದ ಕೆಲವೇ ಸಮಯದಲ್ಲಿ ಬೊಬ್ಬೆ ಹೊಡೆದುಕೊಂಡು ಯಕ್ಷಗಾನ ನಡೆಯುತ್ತಿದ್ದಲ್ಲಿಗೆ ಮತ್ತೆ ಧಾವಿಸಿ ಬಂದ ಆತನನ್ನು ತಡೆಯಲು ಹೋದ ಜನರ ಮೇಲೆರಗಿ ಗೊಂದಲ ಸೃಷ್ಟಿಸಿದ ಘಟನೆಯೂ ನಡೆಯಿತು.