ಸಮಗ್ರ ನ್ಯೂಸ್: ಕಾಂಞಂಗಾಡ್ನಿಂದ ಕಾಣಿಯೂರು ವರೆಗೆ ಸಂಪರ್ಕ ಕಲ್ಪಿಸುವ ರೈಲ್ವೇ ಮಾರ್ಗ ಯೋಜನೆಯು ಅಭಿವೃದ್ದಿ ಕಾಣದೇ ನೆನೆಗುದಿಗೆ ಬಿದ್ದಿದ್ದು ಈ ವಿಷಯದಲ್ಲಿ ಕರ್ನಾಟಕ ಸರಕಾರದ ಜತೆ ಮಾತುಕತೆ ನಡೆಸಲು ರೈಲ್ವೇ ಹೋರಾಟ ಸಮಿತಿ ನಿಯೋಗವೊಂದು ಪುತ್ತೂರು ಶಾಸಕ ಅಶೋಕ್ ಕುಮಾರ್ರೈ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
2008 ರಲ್ಲಿ ಕಾಂಞಂಗಾಡ್- ಕಾಣಿಯೂರು ರೈಲ್ವೇ ಹೊಸ ಮಾರ್ಗಕ್ಕೆ ಕೇಂದ್ರ ರೈಲ್ವೇ ಇಲಾಖೆ ಅನುಮೋದನೆ ನೀಡಿತ್ತು. ಕಾಮಗಾರಿಗೆ ಡಿಪಿಆರ್ ಸಿದ್ಧಪಡಿಸಿ, ಬಳಿಕ ಕೇಂದ್ರ ಸರಕಾರ 1350 ಕೋಟಿ ರೂ ಯೋಜನೆಯನ್ನು ಸಿದ್ಧಪಡಿಸಬೇಕಿದೆ. ಇದರಲ್ಲಿ ಕೇರಳ ಮತ್ತು ಕರ್ನಾಟಕ ರಾಜ್ಯ ಸರಕಾರವು 50:50 ರಷ್ಟು ಅನುದಾನವನ್ನು ಒದಗಿಸಬೇಕಿದೆ. ಕೇರಳ ಸರಕಾರ ಈಗಾಗಲೇ 320 ಕೋಟಿ ರೂ ಅನುದಾನವನ್ನು ನೀಡಲು ಒಪ್ಪಿದ್ದು, ಕರ್ನಾಟಕ ಸರಕಾರದ ಅನುದಾನ ಕುರಿತು ಸರಕಾರದ ಜತೆ ಮಾತುಕತೆ ನಡೆಸಬೇಕಿದೆ.
ಈ ಮಾತುಕತೆ ಮುಂದಿನ ವಾರ ನಡೆಯಲಿದ್ದು ಹೋರಾಟ ಸಮಿತಿ ಮತ್ತು ಶಾಸಕ ಅಶೋಕ್ ರೈ ಜಂಟಿಯಾಗಿ ಸಿಎಂ ಸಿದ್ಧರಾಮಯ್ಯನವರನ್ನು ಭೇಟಿಯಾಗಿ ಆಗ್ರಹಿಸಲು ನಿರ್ಧರಿಸಲಾಗಿದೆ. ನಿಯೋಗದಲ್ಲಿ ಸಮಿತಿಯ ಬೆಟ್ಟ ಜಯರಾಂ, ನ್ಯಾಯವಾದಿ ಎಂ.ಸಿ. ಜೋಶ್, ಎ ಹಮೀದ್ ಹಾಜಿ, ಸೂರ್ಯ ನಾರಾಯಣ ಭಟ್, ಕುಂಞಿ ಕಣ್ಣನ್, ಮೊಹಮ್ಮದ್ ಉಪಸ್ಥಿತರಿದ್ದರು.