ಸಮಗ್ರ ನ್ಯೂಸ್: ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯಕ್ಕೆ ₹ 352 ಕೋಟಿ ಅನುದಾನ ಮಂಜೂರು ಆಗಿದ್ದು, ಉಪ್ಪಿನಂಗಡಿ ಸಂಗಮ ಕ್ಷೇತ್ರವನ್ನು ಕೂಡಲ ಸಂಗಮದಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ, ಉಪ್ಪಿನಂಗಡಿ ವಿಜಯ-ವಿಕ್ರಮ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹೇಳಿದರು.
ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ಕಿನಾರೆಯಲ್ಲಿ ವಿಜಯ- ವಿಕ್ರಮ ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಧರ್ಮ, ಜಾತಿಯ ಭೇದ ಬಿಟ್ಟು ಒಗ್ಗೂಡಿ, ಒಂದೇ ತಾಯಿಯ ಮಕ್ಕಳಂತೆ ಬದುಕಿದಾಗ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ. ಹಿಂದುತ್ವದ ಬಗ್ಗೆ ಭಾಷಣಕ್ಕೆ ಮಾತ್ರ ಸೀಮಿತರಾದವರು ಮಾಡದ ಕೆಲಸವನ್ನು ನಾನು ಶಾಸಕನಾಗಿ ಮಾಡಿದ್ದೇನೆ ಎಂದರು.
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಚಲನಚಿತ್ರ ನಟ ವಿನುತ್ ಕುಮಾರ್, ನಟಿ ಸಮಂತಾ ಅಮೀನ್ ಮಾತನಾಡಿದರು.
ಪ್ರಮುಖರಾದ ಡಾ.ರಾಜಾರಾಮ್ ಕೆ.ಬಿ., ಚಂದ್ರಹಾಸ ಶೆಟ್ಟಿ, ಶಿವನಾಥ ರೈ ಮೇಗಿನಗುತ್ತು, ದಾಸಪ್ಪ ಗೌಡ, ಯೋಗೀಶ ಪೂಜಾರಿ ಕಡ್ತಿಲ, ಹರಿಪ್ರಸಾದ್ ರೈ ಮಠಂತಬೆಟ್ಟು, ಹೇಮನಾಥ ಶೆಟ್ಟಿ ಕಾವು, ಎಂ.ಎಸ್.ಮಹಮ್ಮದ್, ಮುರಳೀಧರ ರೈ ಮಠಂತಬೆಟ್ಟು, ಕೃಷ್ಣಪ್ರಸಾದ್ ಆಳ್ವ, ಜಯಪ್ರಕಾಶ್ ಬದಿನಾರು, ಗುಣಪಾಲ ಕಡಂಬ, ಡಾ.ರಘು ಬೆಳ್ಳಿಪ್ಪಾಡಿ, ಗಿರಿಜಾ ಸಂಜೀವ ರೈ, ಸುಮಾ ಅಶೋಕ್ ರೈ, ಕೃಷ್ಣ ಜಿ.ರಾವ್ ಆರ್ತಿಲ, ಅನಿ ಮಿನೇಜಸ್, ಎನ್.ಉಮೇಶ್ ಶೆಣೈ, ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ವಿದ್ಯಾಧರ ಜೈನ್ ಪದ್ಮವಿದ್ಯಾ, ರಾಮಚಂದ್ರ ಮಣಿಯಾಣಿ ಭಾಗವಹಿಸಿದ್ದರು.
ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಸ್ವಾಗತಿಸಿದರು. ಕಂಬಳ ಸಮಿತಿ ಗೌರವ ಸಲಹೆಗಾರ ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಂಬಳದಲ್ಲಿ ನೇಗಿಲು ಕಿರಿಯ, ಹಗ್ಗ ಹಿರಿಯ, ನೇಗಿಲು ಹಿರಿಯ ಹಗ್ಗ ಹಿರಿಯ, ಅಡ್ಡಹಲಗೆ ಮತ್ತು ಕನೆ ಹಲಗೆ ವಿಭಾಗಗಳಲ್ಲಿ 131 ಜೊತೆ ಕೋಣಗಳು ಭಾಗವಹಿಸಿದ್ದವು. ಕಂಬಳ ಓಟಗಾರರಾದ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ, ಮಹಾಬಲ ಶೆಟ್ಟಿ ಬಾಲಾಜೆಗುತ್ತು ಅವರನ್ನು ಗೌರವಿಸಲಾಯಿತು.