ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿಯಲ್ಲಿ ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ.
ನೀರು ಹಿಡಿಯುವಾಗ ಕರೆಂಟ್ ಶಾಕ್ ಹೊಡೆದು ಮಹಿಳೆ ದಾರುಣವಾಗಿ ಸಾವಿಗೀಡಾಗಿರುವ ಘಟನೆ ಕೆ.ಆರ್. ಮಾರ್ಕೆಟ್ ರಸ್ತೆಯ ಆನಂದಪುರದಲ್ಲಿ ನಡೆದಿದೆ.
ಸೆಲ್ವಿ ಮೃತ ಮಹಿಳೆ. ಇಲ್ಲಿರುವ ಯಾವ ಮನೆಗೂ ನೀರಿನ ಸಂಪರ್ಕ ಇಲ್ಲ. ದೊಡ್ಡ ಪೈಪ್ನಲ್ಲಿ ಅಲ್ಲಲ್ಲಿ ಮೋಟರ್ ಕನೆಕ್ಷನ್ ನೀಡಲಾಗಿದೆ. ಮೃತ ಸೆಲ್ವಿ ಇಂದು ಬೆಳಗ್ಗೆ 5:30ರ ಸುಮಾರಿಗೆ ಮೋಟರ್ ಸ್ಟಾರ್ಟ್ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ. ಆಕ್ರೋಶಗೊಂಡ ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ದಾರೆ.
ಇದರಿಂದ ಮಾರ್ಕೆಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ನ್ಯಾಯ ಬೇಕು ಎಂದು ಘೋಷಣೆ ಕೂಗಿ ಸಾರ್ವಜನಿಕರು ಪ್ರತಿಭಟಿಸಿದ್ದಾರೆ. ಜಲಮಂಡಳಿ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹಲವು ವರ್ಷಗಳಿಂದ ನೀರಿನ ಸಮಸ್ಯೆ ಬಗೆಹರಿದಿಲ್ಲ. ನೀರಿಗಾಗಿ ಪರದಾಡ್ತಿದ್ದೀವಿ. ನೀರು ಕೇಳಿದರೆ ನಮ್ಮ ಮೇಲೆ ಎಫ್ಐಆರ್ ಹಾಕ್ತಾರೆ. ನೀರು ಕೊಟ್ಟಿದ್ರೆ ನಾವ್ಯಾಕೆ ಮೋಟರ್ ಹಾಕ್ತಿದ್ವಿ ಎಂದು ಸ್ಥಳೀಯ ಶಾಸಕ ಜಮೀರ್ ವಿರುದ್ಧ ಜನರು ಕಿಡಿಕಾರಿದ್ದಾರೆ. ನಾಲ್ಕೈದು ಜನ ಇದೇ ರೀತಿ ಸಾವನ್ನಪ್ಪಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಜನರು ಪ್ರತಿಭಟಿಸಿದ್ದಾರೆ.