ಸಮಗ್ರ ನ್ಯೂಸ್: ಸೋಮವಾರ ರಾತ್ರಿಯಿಂದ ನಾಪತ್ತೆಯಾಗಿದ್ದ ಗೋಳಿತೊಟ್ಟು ಗ್ರಾಮದ ಆಂಜರ ಮನೆ ನಿವಾಸಿ ಗಗನ್ ರಾಜ್ ಶೆಟ್ಟಿ (20) ಅವರ ಮೃತದೇಹ ಇಲ್ಲಿನ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.
ಆಂಜರಮನೆ ನಿವಾಸಿ ರವಿಚಂದ್ರ ಶೆಟ್ಟಿ ಅವರ ಮಗನಾಗಿದ್ದ ಗಗನ್ ರಾಜ್ ಶೆಟ್ಟಿ ರಿಕ್ಷಾ ಚಾಲಕನಾಗಿದ್ದು, ಸೋಮವಾರ ರಾತ್ರಿ ನೆಲ್ಯಾಡಿ ಕಡೆಗೆ ಬಾಡಿಗೆ ಇದೆ ಎಂದು ಹೇಳಿ ಹೋದವರು ರಾತ್ರಿ 10 ಗಂಟೆಯಿಂದ ನಾಪತ್ತೆಯಾಗಿದ್ದರು.
ಹುಡುಕಾಡಿದಾಗ ಅವರ ರಿಕ್ಷಾವು ಉಪ್ಪಿನಂಗಡಿಯ ನೇತ್ರಾವತಿ ಸೇತುವೆ ಬಳಿ ನಿಲ್ಲಿಸಿದ್ದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ನದಿಯಲ್ಲಿ ಹುಡುಕಿದಾಗ ಶವ ಪತ್ತೆಯಾಗಿದೆ.
ಹೆತ್ತವರ ಮೂವರು ಮಕ್ಕಳಲ್ಲಿ ಏಕೈಕ ಪುತ್ರನಾಗಿದ್ದ ಈತ ಸಾತ್ವಿಕನಾಗಿದ್ದ, ಎಲ್ಲರೊಂದಿಗೂ ಸ್ನೇಹದಿಂದಿದ್ದ. ಯುವತಿಯೊಬ್ಬಳೊಂದಿಗಿನ ಪ್ರೇಮದ ವಿಷಯದಲ್ಲಿ ಮನೆಯಿಂದ ವಿರೋಧ ವ್ಯಕ್ತವಾಗಿತ್ತು ಎಂದು ಹೇಳಲಾಗಿದೆ.