ಸಮಗ್ರ ನ್ಯೂಸ್: ಕನ್ನಡದ ಯುಟ್ಯೂಬರ್ ಸಮೀರ್ ಎಂಬಾತ ತನ್ನ ವಿಭಿನ್ನ ವಿಡಿಯೊಗಳಿಂದ ಯುವ ವೀಕ್ಷಕ ವರ್ಗವನ್ನು ತನ್ನತ್ತ ಸೆಳೆದವರು. ಮಾಟ, ದೆವ್ವ ಹಾಗೂ ವಿಸ್ಮಯಗಳಂತಹ ವಿಭಿನ್ನ ವಿಡಿಯೊಗಳನ್ನು ಮಾಡುತ್ತಾ ಬರುತ್ತಿದ್ದ ಸಮೀರ್ ಆಗಾಗ ಕೆಲ ಘಟನೆಗಳ ಕುರಿತು ಸಹ ವಿಡಿಯೊಗಳನ್ನು ಮಾಡುತ್ತಿದ್ದರು.
ಹೀಗೆ ಒಳ್ಳೊಳ್ಳೆ ಅಂಶಗಳಿರುವ ವಿಡಿಯೊಗಳನ್ನು ಮಾಡುತ್ತಾ ಬಂದಿರುವ ಸಮೀರ್ ಸದ್ಯ ತನ್ನ ಯುಟ್ಯೂಬ್ ಚಾನೆಲ್ನಲ್ಲಿ ಹೊಸ ವಿಡಿಯೊವೊಂದನ್ನು ಹಂಚಿಕೊಂಡಿದ್ದು ಸದ್ಯ ಆ ವಿಡಿಯೊ ತೀವ್ರ ವಿರೋಧವನ್ನು ಹುಟ್ಟುಹಾಕಿದೆ.
ದಶಕದ ಹಿಂದೆ ನಡೆದಿದ್ದ ಸೌಜನ್ಯಾ ರೇಪ್ ಅಂಡ್ ಮರ್ಡರ್ ಕೇಸ್ ಕುರಿತು ಸಮೀರ್ ವಿಡಿಯೊ ಮಾಡಿದ್ದಾರೆ. ಈ ವಿಡಿಯೊದಲ್ಲಿ ಸೌಜನ್ಯಾ ಕೊಲೆಯ ಕುರಿತು ವಿವರಿಸಿರುವ ಸಮೀರ್ ಪ್ರಕರಣದಲ್ಲಿ ಎಲ್ಲೆಲ್ಲಿ ಸಾಕ್ಷ್ಯ ನಾಶವಾಯಿತು ಹಾಗೂ ನಿರಪರಾಧಿಯನ್ನು ಹೇಗೆ ಸಿಕ್ಕಿಹಾಕಿಸಲಾಯಿತು ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ಇನ್ನು ಇದೇ ವಿಡಿಯೊದ ಆರಂಭದಲ್ಲಿ ಧರ್ಮಸ್ಥಳ ದೇವಾಲಯ ಒಂದು ಜೈನ್ ದೇವಾಲಯ ಎಂಬುದನ್ನು ಅದರ ಮಾಲೀಕರೇ ಸರ್ಕಾರಕ್ಕೆ ತಿಳಿಸಿದ್ದಾರೆ ಎಂದು ಸಾಕ್ಷಿಯನ್ನೂ ಸಹ ಬಿಚ್ಚಿಟ್ಟಿದ್ದರು ಸಮೀರ್.
ಹೀಗೆ ಸಮೀರ್ ವಿಡಿಯೊ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊಗಳ ಕೆಲ ತುಣುಕುಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಹೀಗೆ ವೈರಲ್ ಆದ ಬೆನ್ನಲ್ಲೇ ಸಮೀರ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಂಚಿಕೊಂಡಿದ್ದು, ತನಗೆ ಯಾವಾಗ ಏನು ಬೇಕಾದರೂ ಆಗಬಹುದು ಎಂದು ಹೇಳಿಕೊಂಡಿದ್ದಾರೆ.
ತಾವೇ ಮಾತನಾಡಿರುವ ವಿಡಿಯೊ ಹಂಚಿಕೊಂಡಿರುವ ಸಮೀರ್ ಮೊದಲಿಗೆ ‘ನ್ಯಾಯ ಕೇಳೋದ್ರಲ್ಲೂನೂ ಜಾತಿ – ಧರ್ಮ ಎಲ್ಲಿಂದ ಬಂತೋ ನನಗೆ ಗೊತ್ತಿಲ್ಲ’ ಎಂದು ಬೇಸರ ಹೊರಹಾಕಿದ್ದಾರೆ. ಅಲ್ಲದೇ ಮತ್ತೊಂದು ಸ್ಟೋರಿಯಲ್ಲಿ ‘ನನ್ನ ಮನೆ ಅಡ್ರೆಸ್ ಲೀಕ್ ಮಾಡಿರೋರಿಗೆ, ನನ್ನ ಫೋನ್ ನಂಬರ್ ಲೀಕ್ ಮಾಡಿರೋರಿಗೆ ನನ್ನ ಹುಡುಕೊಂಡು ಬಂದು ಹೊಡಿಯೋದು ಕಷ್ಟ ಆಗಲ್ಲ. ಹೀಗಾಗಿ ಕನ್ನಡ ಯುಟ್ಯೂಬ್ ಕಮ್ಯೂನಿಟಿಯಲ್ಲಿ ಕೈ ಮುಗಿದು ಕೇಳಿಕೊಳ್ತೀನಿ ಈ ವಿಷಯವಾಗಿ ನಿಮ್ಮ ದನಿ ಎತ್ತಿ’ ಎಂದು ಸಮೀರ್ ಹೇಳಿದ್ದಾರೆ.