ಸಮಗ್ರ ನ್ಯೂಸ್: ದೇಗುಲದಲ್ಲಿ ಗುರುವಾರ ಉತ್ಸವದ ವೇಳೆ ಎರಡು ಆನೆಗಳು ದಿಕ್ಕಾಪಾಲಾಗಿ ಓಡಿದ್ದು, ಅದರಿಂದ ಚದುರಿದ ಗುಂಪುಗೂಡಿದ್ದವರ ಕಾಲ್ತುಳಿತದಿಂದಾಗಿ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ಕೇರಳದ ಕೋಝಿಕ್ಕೋಡ್ ನ ಕೊಯಿಲಾಂಡಿಯಲ್ಲಿ ನಡೆದಿದೆ.
ಇಲ್ಲಿನ ಮಣಕುಳಂಗರ ದೇವಸ್ಥಾನದ ಆವರಣದಲ್ಲಿ ಈ ಅವಘಡ ಸಂಭವಿಸಿದ್ದು, ಉದ್ರಿಕ್ತ ಆನೆಗಳ ಕಂಡು ಜನರು ಓಡಿದ್ದರಿಂದ ಐವರು ಗಾಯಗೊಂಡರು. ಅವರ ಸ್ಥಿತಿ ಗಂಭೀರವಾಗಿದೆ.
ವರದಿಗಳ ಪ್ರಕಾರ, ರೋಷಗೊಂಡ ಆನೆಯು ಮತ್ತೊಂದು ಆನೆಯ ಮೇಲೆ ದಾಳಿ ನಡೆಸಿದೆ. ಆಗ ಎರಡೂ ಆನೆಗಳು ಜನರ ಗುಂಪಿನ ನಡುವೆ ಓಡಾಡಿದ್ದು, ನೂಕುನುಗ್ಗಲಿಗೆ ಕಾರಣವಾಯಿತು. 30 ನಿಮಿಷದ ಬಳಿಕ ಆನೆಗಳು ಸಹಜ ಸ್ಥಿತಿಗೆ ಮರಳಿದ್ದು, ಪರಿಸ್ಥಿತಿ ತಿಳಿಯಾಯಿತು. ಆನೆ ದಾಳಿಯಿಂದ ಗೋಡೆಯೊಂದು ಕುಸಿದಿದೆ.
ಕಳೆದ ವಾರ ರಾಜ್ಯದಲ್ಲಿ ಇಂತಹದೇ ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಸತ್ತಿದ್ದರು. ಉತ್ಸವಗಳಲ್ಲಿ ಆನೆಗಳ ಬಳಕೆ ಕುರಿತು ಕಠಿಣ ನಿಯಮಗಳನ್ನು ಹೈಕೋರ್ಟ್ ಹೇರಿತ್ತು. ಆದರೆ, ಉತ್ಸವಗಳ ಆಯೋಜಕರು ವಿರುದ್ಧ ಸುಪ್ರೀಂ ಕೋರ್ಟ್ಗೆ ಹೋಗಿದ್ದು ಇದಕ್ಕೆ ತಡೆಯಾಜ್ಞೆ ತಂದಿದ್ದರು.