ಸಮಗ್ರ ನ್ಯೂಸ್: ನಾಪತ್ತೆಯಾದ ವ್ಯಕ್ತಿಯೊಬ್ಬರ ಶವ ಪಯಸ್ವಿನಿ ನದಿಯಲ್ಲಿ ಪತ್ತೆಯಾದ ಘಟನೆ ಸುಳ್ಯ ಸಮೀಪದ ಭಸ್ಮಡ್ಕ ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಇಲ್ಲಿನ ಕುರುಂಜಿಗುಡ್ಡೆ ನಿವಾಸಿ ಕುಮಾರ್ ಎಂದು ಗುರುತಿಸಲಾಗಿದೆ.
ವಿಶೇಷ ಚೇತನರಾದ ಕುಮಾರ್ ಅವರು ಭಾನುವಾರ(ಜೂ.23) ಮಧ್ಯಾಹ್ನದ ನಂತರ ನಾಪತ್ತೆಯಾಗಿದ್ದರು. ಎಲ್ಲಾ ಕಡೆ ಹುಡುಕಾಡಿದರೂ ಅವರ ಸುಳಿವು ಲಭ್ಯವಾಗಿರಲಿಲ್ಲ. ಬಳಿಕ ಭಸ್ಮಡ್ಕ ಎಂಬಲ್ಲಿ ಪಯಸ್ವಿನಿ ನದಿಯ ದಡದಲ್ಲಿ ಅವರ ಚಪ್ಪಲಿ ಪತ್ತೆಯಾಗಿತ್ತು.
ಹೀಗಾಗಿ ಸೋಮವಾರ ಬೆಳಗ್ಗಿನಿಂದಲೇ ಅಗ್ನಿಶಾಮಕ ಸಿಬ್ಬಂದಿ, ಮುಳುಗು ತಜ್ಞರ ಕಾರ್ಯಾಚರಣೆ ನಡೆಸಲು ಆರಂಭಿಸಿದ್ದರು. ಆದರೆ ಇಂದು ಬೆಳಗ್ಗಿನವರೆಗೆ ಅವರು ಪತ್ತೆಯಾಗಿರಲಿಲ್ಲ. ಹೀಗಾಗಿ ಸ್ವಲ್ಪ ದೂರ ಹೋಗಿ ಹುಡುಕಾಟ ನಡೆಸಲಾಗಿತ್ತು. ಈ ವೇಳೆ ಸುಮಾರು 1 ಕಿ.ಮೀ. ದೂರದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಮೃತದೇಹವನ್ನು ಸುಳ್ಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದು ಮಹಜರು ನಡೆಸಿ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






