ಸಮಗ್ರ ನ್ಯೂಸ್: ರಾಜ್ಯದಲ್ಲಿ ಕಳೆದ 15 ದಿನಗಳಿಂದ ಮಳೆರಾಯ ಕಾಣೆಯಾಗಿದ್ದಾನೆ. ಎಲ್ಲೆಲ್ಲೂ ಬೇಸಿಗೆಯಂತೆ ಬಿಸಿಲು ಕಾಯುತ್ತಿದೆ. ನದಿ, ತೊರೆಯ ನೀರು ಬತ್ತಲು ಆರಂಭಿಸಿದೆ. ಇದಕ್ಕೆ ಕರಾವಳಿಯೂ ಹೊರತಾಗಿಲ್ಲ. ಜೂನ್ ತಿಂಗಳ ಅಂತ್ಯದ ಜುಲೈ ತಿಂಗಳಲ್ಲಿ ಕರಾವಳಿ ಭಾಗದಲ್ಲಿ ಮಳೆರಾಯನ ಅರ್ಭಟ ಜೋರಾಗಿತ್ತು.
ಕರಾವಳಿ ಕರ್ನಾಟಕದ ಭಾಗವಾದ ಕಾಸರಗೋಡಿನಿಂದ ಕಾರವಾರದವರೆಗಿನ ಪ್ರದೇಶಗಳಲ್ಲಿ ಮಂಗಳವಾರವೂ ಮಳೆಗೆ ರಜೆ. ಶನಿವಾರದಿಂದಲೇ ಇಲ್ಲಿಗೆ ಪ್ರವಾಸಿಗರು ಮುಗಿಬಿದ್ದಿದ್ದು, ಭಾನುವಾರ ರಜಾ ದಿನ ಹಾಗೂ ಸೋಮವಾರವೂ ರಜೆ ಹಾಕಿ ಪ್ರವಾಸಿಗರು ತಿರುಗಾಟ ನಡೆಸಿದ ಹಿನ್ನೆಲೆಯಲ್ಲಿ ತೀರ್ಥಕ್ಷೇತ್ರಗಳಲ್ಲಿ ಜನಸಂದಣಿ ಇತ್ತು. ಆದರೆ ಬಿಸಿಲಿನ ಝಳಕ್ಕೆ ಬಸವಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30.9 ಡಿಗ್ರಿ ಸೆಂಟಿಗ್ರೇಡ್., ಉಡುಪಿಯಲ್ಲಿ 31.5 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 30.3 ಡಿ.ಸೆ. ತಾಪಮಾನ ಮಂಗಳವಾರ ದಾಖಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಳೆದ ಎರಡು ವಾರಗಳಿಂದ ಇಂಥದ್ದೇ ಸ್ಥಿತಿ ಇದೆ. ಉರಿಬಿಸಿಲು ಮತ್ತು ಭಾರಿ ಸೆಖೆಯ ವಾತಾವರಣ ಇಲ್ಲಿ ಕಾಣಿಸಿಕೊಂಡಿದೆ. ಕೆಲವು ದಿನಗಳಿಂದ ಮಳೆ ತೀವ್ರತೆಯೂ ಕಡಿಮೆಯಾಗಿದ್ದು, ಸೆಖೆ ಮುಂದುವರಿಯುವ ಸಾಧ್ಯತೆಯೇ ಹೆಚ್ಚು.
ಮಳೆಗಾಲ ಆರಂಭಗೊಂಡು ಎರಡೂವರೆ ತಿಂಗಳು ಕಳೆದಿದ್ದು, ಮುಂಗಾರು ದುರ್ಬಲವಾಗಿದೆ. ಮೇ ತಿಂಗಳಲ್ಲಿ ಮಳೆ ಬಾರದೆ ಮುಂಗಾರು ವಿಳಂಬವಾಗಿ ಬಂದರೂ ಸಮೃದ್ಧ ಮಳೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಅದೂ ಹುಸಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಡಿಕೆ ಮಳೆಗೆ ಹೋಲಿಸಿದರೆ, ಸುರಿದ ಮಳೆಯ ಪ್ರಮಾಣವನ್ನು ಗಮನಿಸಿದರೆ, ಮಳೆ ಕೊರತೆ ಶೇ.24 ಇದ್ದರೆ, ಉಡುಪಿ ಜಿಲ್ಲೆಯಲ್ಲಿ ಶೇ.19 ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.8 ಇದ್ದು, ಒಟ್ಟಾರೆ ಕರ್ನಾಟಕ ಕರಾವಳಿಯಲ್ಲಿ ವಾಡಿಕೆ ಮಳೆಗಿಂತ ಸುರಿದ ಮಳೆಯನ್ನು ಗಮನಿಸಿದರೆ, ಶೇ.14ರಷ್ಟು ಕೊರತೆ ಇದೆ. ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಶೇ.24 ಮಳೆ ಕೊರತೆ ಕಂಡುಬಂದಿದೆ.
ಕರ್ನಾಟಕದ ಬಹುತೇಕ ಕಡೆಗಳಲ್ಲಿ ಮಳೆರಾಯ ರಜೆ ಹಾಕಿದಂತೆ ಇದೆ. ಆಕಾಶದಲ್ಲಿ ಮೋಡಗಳು ಚದುರಿದ್ದು, ಕೆಲವು ಕಡೆ ಬಿಸಿಲಿನ ತಾಪವೂ ಹೆಚ್ಚಾಗಿದೆ. ದಕ್ಷಿಣ ಒಳನಾಡಿನ ಕೆಲವು ಕಡೆ ಇಂದು ಹಗುರ ಮಳೆಯ ಸೂಚನೆಯಿದೆ. ಒಂದೆರಡು ಕಡೆ ಮಾತ್ರ ಗುಡುಗು ಮಿಂಚು ಸಹಿತ ಹಗುರ/ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಕಡೆಗಳಲ್ಲಿ ಬಿಸಿಲು, ಒಣಹವೆ ಇರಲಿದೆ.







