ಸಮಗ್ರ ನ್ಯೂಸ್: ರಜೆ ಅವಧಿಯಲ್ಲಿ ಕಾರ್ಯಕ್ರಮಕ್ಕೆ ಸಂಬಂಧಿಗಳ ಮನೆಗೆ ಬಂದಿದ್ದ ಸಹೋದರಿಯಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕಡಬ ತಾಲೂಕಿನ ಬಳ್ಪ ಸಮೀಪದ ಕೇನ್ಯ ಗ್ರಾಮದಲ್ಲಿ ನಡೆದಿದೆ.

ಮೇ.8ರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಮೂಲತಃ ಕಣ್ಕಲ್ ನವರಾಗಿದ್ದು ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಸತೀಶ್ ಅಮ್ಮಣ್ಣಾಯ ಅವರ ಪುತ್ರಿಯರಾದ ಹಂಸಿತಾ ( 15 ) ಮತ್ತು ಅವಂತಿಕಾ ( 11 ) ಎಂಬ ಸಹೋದರಿಯರು ನೀರು
ಪಾಲಾದ ದುರ್ದೈವಿಗಳು.
ಸಹೋದರಿಯರು ನೀರುಪಾಲಾದ ಸುದ್ದಿ ತಿಳಿದು ಆಗಮಿಸಿದ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದ್ದು, ರಾತ್ರಿ ವೇಳೆಗೆ ಇಬ್ಬರ ಮೃತದೇಹವೂ ಪತ್ತೆಯಾಯಿತು. ಸ್ಥಳೀಯರು ಕಾರ್ಯಾಚರಣೆಗೆ ಸಹಕರಿಸಿದರು.
ಸತೀಶ್ ಅಮ್ಮಣ್ಣಾಯ ಅವರ ಮನೆಯಲ್ಲಿ ನಡೆಯುವ ಕಾರ್ಯಕ್ರಮವೊಂದರ ನಿಮಿತ್ತ ಈ ಮಕ್ಕಳು ತಾಯಿಯೊಂದಿಗೆ ಇಂದು(ಮೇ.8) ಬೆಂಗಳೂರಿನಿಂದ ಆಗಮಿಸಿದ್ದರು.
ಸಂಜೆ ವೇಳೆ ಸಹೋದರಿಯರು ಸ್ನಾನಕ್ಕೆಂದು ಹೊಳೆಗೆ ಹೋಗಿದ್ದರು. ಈ ವೇಳೆ ಒಬ್ಬಾಕೆ ನೀರಿನ ಸೆಳೆತಕ್ಕೆ ಸಿಲುಕಿದಾಗ ಮತ್ತೊಬ್ಬಾಕೆ ರಕ್ಷಿಸಲು ಹೋಗಿ ಇಬ್ಬರೂ ನೀರುಪಾಲಾಗಿರಬಹುದೆಂದು ಶಂಕಿಸಲಾಗಿದೆ.