ಹೃದಯಾಘಾತ; ಜೆಡಿಎಸ್ ಯುವಮುಂದಾಳು ಸಾವು

ಸಮಗ್ರ ನ್ಯೂಸ್: ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿದ್ದು ಆತಂಕ ಸೃಷ್ಟಿಸಿದೆ. ಇಂತಹ ಮತ್ತೊಂದು ಆಘಾತಕಾರಿ ಪ್ರಕರಣದಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್​ನಲ್ಲಿ ಜೆಡಿಎಸ್​​ನ ಯುವ ಮುಖಂಡ, ತಂದೆ-ತಾಯಿಯ ಏಕೈಕ ಪುತ್ರ ಹೃದಯಾಘಾತದಿಂದಾಗಿ ಸಾವಿಗಿಡಾಗಿದ್ದಾನೆ.

Ad Widget ... ..

ಮಲ್ಲಾಘಟ್ಟ ವಾರ್ಡ್ ನೀಲತ್ತಹಳ್ಳಿ ಗೇಟ್ ನಿವಾಸಿ, ಜೆಡಿಎಸ್ ಯುವ ಮುಖಂಡ ಎಂ.ಜಿ.ಶ್ರೀನಿವಾಸ್ (32) ಸಾವಿಗೀಡಾದ ಯುವಕ. ಈತ ಗುರುವಾರ ರಾತ್ರಿ 9 ಗಂಟೆಯಲ್ಲಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾನೆ. ಈತ ಗಂಗಾಧರಯ್ಯ ಮತ್ತು ಗಂಗಮ್ಮ ದಂಪತಿಯ ಏಕೈಕ ಪುತ್ರ.

Ad Widget

ಶ್ರೀನಿವಾಸ ಗುರುವಾರ ಸಂಜೆ ಸ್ನೇಹಿತರೊಂದಿಗೆ ಕುಣಿಗಲ್ ಪಟ್ಟಣದ ಜಿಮ್ ತರಬೇತಿಗೆ ದಾಖಲಾತಿ ಪಡೆದು ಐದು ನಿಮಿಷ‌ ವರ್ಕೌಟ್ ಮಾಡಿ ಹೊರ ಬಂದಿದ್ದರು. ಇದಾದ ಕೆಲ ನಿಮಿಷದ ಬಳಿಕ ವಾಂತಿ ಆಗಿದ್ದು, ಭುಜ, ಕತ್ತು, ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಪಟ್ಟಣದ ಖಾಸಗಿ ಕ್ಲಿನಿಕ್​ಗೆ ತೆರಳಿದ್ದು, ತಪಾಸಣೆ ಮಾಡಿಸಿಕೊಳ್ಳುತ್ತಿರುವಾಗಲೇ ಕುಸಿದುಬಿದ್ದರು. ಕೂಡಲೇ ಎಂಎಂ‌ ಆಸ್ಪತ್ರೆಗೆ ಅಂಬ್ಯುಲೆನ್ಸ್​​ನಲ್ಲಿ ಕರೆದೊಯ್ಯಲಾಗಿತ್ತಾದರೂ ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು.

ಇದ್ದೊಬ್ಬ ಮಗನ ಮದುವೆ ಮಾಡುವ ಸಂಭ್ರಮದಲ್ಲಿದ್ದ ಕುಟುಂಬಸ್ಥರು ವಧು ಅನ್ವೇಷಣೆಗಾಗಿ ಭಾನುವಾರ ತೆರಳಲು ಸಿದ್ಧತೆಯಲ್ಲಿದ್ದರು. ಆದರೆ ಅಷ್ಟರೊಳಗೇ ಮಗನ ಅಕಾಲಿಕ ಸಾವಿನ ಸುದ್ದಿ ಕುಟುಂಬಸ್ಥರಿಗೆ ಆಘಾತ ನೀಡಿದೆ.

Leave a Comment

Your email address will not be published. Required fields are marked *