ಸಮಗ್ರ ನ್ಯೂಸ್: ‘ವಿನಾಕಾರಣ ಮತ್ತು ಸಂಬಂಧವಿಲ್ಲದ ವ್ಯಕ್ತಿಗಳು ಹೈಕೋರ್ಟ್ನ ಹಾಲ್ಗಳಿಗೆ ಪ್ರವೇಶಿಸಿದರೆ ಅಂತಹವರನ್ನು ಬಂಧಿಸಿ ನೇರವಾಗಿ ಜೈಲಿಗೆ ಕಳುಹಿಸಲಾಗುವುದು’ ಎಂದು ಹೈಕೋರ್ಟ್ ಕಠಿಣವಾದ ಮೌಖಿಕ ಎಚ್ಚರಿಕೆ ನೀಡಿದೆ.
‘ವಕೀಲರು, ಕಾನೂನು ವಿದ್ಯಾರ್ಥಿಗಳು, ಕೇಸಿಗೆ ಸಂಬಂಧಿಸಿದ ಕಕ್ಷಿದಾರರು, ಅಧಿಕಾರಿಗಳು ಹಾಗೂ ಸಕಾರಣ ಹೊಂದಿದ ವ್ಯಕ್ತಿಗಳಿಗೆ ಮಾತ್ರವೇ ಕೋರ್ಟ್ ಹಾಲ್ ಪ್ರವೇಶ ಇರುತ್ತದೆ’ ಎಂದು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಹೇಳಿದೆ.
ಸಚಿವ ಮುನಿರತ್ನ ವಿರುದ್ಧ ವಿಧಾನಪರಿಷತ್ ಸದಸ್ಯ ತುಳಸಿ ಮುನಿರಾಜು ಗೌಡ ದಾಖಲಿಸಿರುವ ಚುನಾವಣಾ ಅಕ್ರಮ ಆರೋಪದ ತಕರಾರು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಮಧ್ಯಾಹ್ನದ ಕಲಾಪದಲ್ಲಿ ವಿಚಾರಣೆ ಮುಂದುವರಿಸಿತು. ಈ ವೇಳೆ ಮುನಿರತ್ನ ಪರ ಹಿರಿಯ ವಕೀಲ ಜಿ.ಕೃಷ್ಣಮೂರ್ತಿ ಅವರು ತುಳಸಿ ಮುನಿರಾಜು ಗೌಡ ಅವರನ್ನು ಪಾಟಿ ಸವಾಲಿಗೆ ಒಳಪಡಿಸಿದರು.
ಸುದೀರ್ಘ ಕಲಾಪದ ಅವಧಿಯುದ್ದಕ್ಕೂ ಹಾಜರಿದ್ದ ಕೆಲವು ವ್ಯಕ್ತಿಗಳನ್ನು ಗಮನಿಸಿದ ನ್ಯಾಯಪೀಠವು, ಕಲಾಪ ಪೂರ್ಣಗೊಳ್ಳುತ್ತಿದ್ದಂತೆಯೇ ಕಳವಳ ವ್ಯಕ್ತಪಡಿಸಿತು. ‘ಹೈಕೋರ್ಟ್ ಎಂದರೆ ಸಾಮಾನ್ಯವಲ್ಲ. ಈ ಕೋರ್ಟ್ ಹಾಲ್ನಲ್ಲಿ ಸಂಬಂಧವಿಲ್ಲದ ಅನೇಕ ಮುಖಗಳು ಕಾಣುತ್ತಿವೆ. ಇದು ವೈ ಕೆಟಗರಿಯ ಭದ್ರತೆ ಹೊಂದಿರುವ ಕೋರ್ಟ್ ಹಾಲ್. ಕಲಾಪದಲ್ಲಿ ಸಂಬಂಧವಿಲ್ಲದ ವ್ಯಕ್ತಿಗಳು ಏಕೆ ಹಾಜರಿದ್ದಾರೆ’ ಎಂದು ಪ್ರಕರಣದ ಪರ ವಕೀಲರನ್ನು ಪ್ರಶ್ನಿಸಿತು. ಅಂತೆಯೇ, ‘ಇವತ್ತು ಹಾಜರಿದ್ದ ಸಂಬಂಧವಿಲ್ಲದ ವ್ಯಕ್ತಿಗಳ ಇತ್ಯೋಪರಿಗಳನ್ನು ಸಂಗ್ರಹಿಸಿ’ ಎಂದು ಕೋರ್ಟ್ ಅಧಿಕಾರಿ ರಾಘವೇಂದ್ರ ಅವರಿಗೆ ಸೂಚಿಸಿತು.







