ಸಮಗ್ರ ನ್ಯೂಸ್: ದಶಕದಿಂದಲೇ ಪ್ರಸ್ತಾವದಲ್ಲಿದ್ದ ಶಿರಾಡಿ ಘಾಟಿ ಸುರಂಗ ಮಾರ್ಗ ಹೆದ್ದಾರಿ ಯೋಜನೆಯನ್ನು ಕೇಂದ್ರ ಸರಕಾರ ಕೈಬಿಡುವ ಸೂಚನೆಗಳು ಕಾಣುತ್ತಿವೆ. ಈ ಯೋಜನೆಯು ದೊಡ್ಡ ಮೊತ್ತದ್ದಾಗಿದೆ ಹಾಗೂ ಅನೇಕ ಸವಾಲುಗಳಿಂದ ಕೂಡಿರುವ ಕಾರಣ ಇದು ಕಾರ್ಯಸಾಧುವಲ್ಲ ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ.
ಲೋಕಸಭೆಯಲ್ಲಿ ಗುರುವಾರ ಸಂಸದ ನಳಿನ್ ಕುಮಾರ್ ಕಟೀಲು ಅವರ ಪ್ರಶ್ನೆಗೆ, ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿಯವರು ನೀಡಿರುವ ಉತ್ತರದಲ್ಲಿ ಈ ಅಂಶವನ್ನು ಸ್ಪಷ್ಟಪಡಿಸಲಾಗಿದೆ.
ಮಂಗಳೂರಿಗೆ ಫೆಬ್ರವರಿಯಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ, ಶಿಲಾನ್ಯಾಸಕ್ಕಾಗಿ ಆಗಮಿಸಿದ್ದ ಗಡ್ಕರಿಯವರು 6 ಲೇನ್ನ ಶಿರಾಡಿ ಘಾಟ್ ಸುರಂಗ ಮಾರ್ಗ ಯೋಜನೆಯನ್ನು ಶೀಘ್ರ ಕೈಗೆತ್ತಿಕೊಳ್ಳುತ್ತೇವೆ, ಇದಕ್ಕಾಗಿ 14 ಸಾವಿರ ಕೋಟಿ ರೂ.ನ ಯೋಜನೆ ಸಿದ್ಧವಾಗಿದೆ ಎಂದು ತಿಳಿಸಿದ್ದರು.
ಶಿರಾಡಿ ಭಾಗದಲ್ಲಿ ಸಂಚಾರ ದಟ್ಟಣೆ ಸುಗಮ ಗೊಳಿಸಲು ಈಗಿರುವ 2-ಪಥ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಇದಕ್ಕಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸಾಧ್ಯತಾ ವರದಿ (ಡಿಪಿಆರ್) ತಯಾರಿಕೆ ತಜ್ಞರನ್ನು ನೇಮಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಮಂಗಳೂರು ಹಾಗೂ ಬೆಂಗಳೂರು ಮಧ್ಯೆ ಸರಕು ಸಾಗಣೆ ಹಾಗೂ ಜನರ ಸಂಚಾರವನ್ನು ಸುಗಮಗೊಳಿಸುವ ದೃಷ್ಟಿಯಿಂದ ಈ ಯೋಜನೆ ಬಹಳ ಮಹತ್ವದ್ದು ಎಂದು ಈ ಭಾಗದ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪ್ರತಿನಿಧಿಗಳು ಹಿಂದಿನಿಂದಲೂ ಪ್ರತಿಪಾದಿಸಿದ್ದರು.
ಯೋಜನಾ ಸ್ಥಳದ ಭೂ-ತಾಂತ್ರಿಕ ಪರೀಕ್ಷೆಗಳನ್ನು ಆಸ್ಟ್ರಿಯಾ ಮೂಲದ ಜಿಯೊ ಕನ್ಸಲ್ಟ್ ಇಂಡಿಯಾ ಸಂಸ್ಥೆಯವರು ನಡೆಸಿ ಡಿಪಿಆರ್ ಸಿದ್ಧಪಡಿಸಿದ್ದರು. 23.5 ಕಿ.ಮೀ ಉದ್ದದ ಸುರಂಗ ಮಾರ್ಗ ಯೋಜನೆಯಲ್ಲಿ 6 ಸುರಂಗಗಳು, 7 ಸೇತುವೆಗಳು ಸೇರಿದ್ದವು. ಬೆಂಗಳೂರು-ಮಂಗಳೂರು ಮಧ್ಯೆ ರಸ್ತೆ ಸಂಚಾರಕ್ಕೆ ಸದ್ಯ 7-8 ಗಂಟೆ ತಗಲುತ್ತದೆ. ಇದರಲ್ಲಿ ಘಾಟಿ ಪ್ರದೇಶದ ಪ್ರಯಾಣದಲ್ಲಿ ಕನಿಷ್ಠ ಒಂದು ಗಂಟೆ ಕಡಿಮೆ ಮಾಡುವುದು, ಸುಗಮ ಸಂಚಾರಕ್ಕೆ ನೆರವಾಗುವ ಮಹತ್ವದ ಉದ್ದೇಶವನ್ನು ಸುರಂಗ ಮಾರ್ಗ ಯೋಜನೆ ಹೊಂದಿತ್ತು. ರಸ್ತೆ ವಿಸ್ತರಣೆಗೆ ಸಾಕಷ್ಟು ಕಾಡು ನಾಶವಾಗುತ್ತದೆ. ಅದೇ ಸುರಂಗ ಮಾರ್ಗವಾದರೆ ಅಂತಹ ಸಮಸ್ಯೆ ಇಲ್ಲ ಎನ್ನುವುದು ಮತ್ತೂಂದು ಅಂಶವಾಗಿದೆ.







