ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮತ್ವ. ಇಲ್ಲಿ ಕನ್ನಡವೇ ಉಸಿರು, ಕನ್ನಡವೇ ಬದುಕು, ಕನ್ನಡವೇ ಉದ್ಯೋಗವಾಗಿರಬೇಕು. ಕನ್ನಡವೆಂದರೆ ಸಂಸ್ಕೃತಿ, ಇತಿಹಾಸ ಭಾರತ್ ಜೋಡೋ ಅಂಗವಾಗಿ ಗುರುವಾರ ಸಂಜೆ ಮೊಳಕಾಲ್ಮೂರಿನಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ರಾಹುಲ್ ಗಾಂಧಿ ಕನ್ನಡದ ಬಗ್ಗೆ ಸ್ವಾಭಿಮಾನಿ ಕಿಚ್ಚು ಹೊತ್ತಿಸಿದ ಬಗೆಯಿದು.
ರಾಜಕೀಯದ ಜೊತೆಗೆ ಪಕ್ಕಾ ಮಾತೃಭಾಷಾ ಹೋರಾಟಗಾರನಂತೆ ಕನ್ನಡಪರ ವಿಷಯ ಮಂಡಿಸಿದ ಅವರು ಕೇಂದ್ರ ಸರ್ಕಾರದ ಹಿಂದಿ ಹೇರಿಕೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು. ಪಾದಯಾತ್ರೆ ವೇಳೆ ಅನೇಕ ನಿರುದ್ಯೋಗಿ ಯುವಕರು ಬಂದು ಉದ್ಯೋಗ ಇಲ್ಲದೇ ಇರುವುದನ್ನು ಪ್ರಸ್ತಾಪಿಸಿದ್ದಾರೆ. ಬಿಜೆಪಿಗೆ ಇಂಥದ್ದೆಲ್ಲ ಅರ್ಥವಾಗಬೇಕು ಎಂದರು.
ಕನ್ನಡಿಗರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಏಕೆ ಸಾಧ್ಯವಾಗುತ್ತಿಲ್ಲ? ಕನ್ನಡ ಬರೀ ಭಾಷೆಯಲ್ಲ. ಅದೊಂದು ಸಂಸ್ಕೃತಿ, ಇತಿಹಾಸ. ಕನ್ನಡಿಗರಿಗೆ ಇಂಥದ್ದೇ ಭಾಷೆಯಲ್ಲಿ ಪರೀಕ್ಷೆ ಬರೆಯಿರಿ ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಕನ್ನಡ ಭಾಷೆ ಗೌರವಿಸಬೇಕು. ನೆರೆಯ ತಮಿಳುನಾಡು, ಕೇರಳದಲ್ಲಿ ಅಲ್ಲಿನ ಭಾಷೆ ಪ್ರಾಧಾನ್ಯತೆ ಪಡೆದಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆ ಮಾತನಾಡಲು ಹಿಂಜರಿಕೆ ಏಕೆ?. ಕರ್ನಾಟಕದಲ್ಲಿ ಕನ್ನಡವೇ ಪ್ರಥಮ ಆದ್ಯತೆ ಆಗಬೇಕು. ಆದರೆ ಕೇಂದ್ರ ಸರ್ಕಾರ ಕನ್ನಡವನ್ನು 2ನೇ ದರ್ಜೆ ಭಾಷೆಯಾಗಿ ಪರಿಗಣನೆ ಮಾಡಿದೆ. ಬಿಜೆಪಿ, ಆರೆಸ್ಸೆಸ್ ಕರ್ನಾಟಕದ ಇತಿಹಾಸ, ಭಾಷೆ, ತತ್ವ ಸಿದ್ಧಾಂತದ ಮೇಲೆ ದಾಳಿ ಮಾಡುತ್ತಿದೆ ಎಂದು ಆರೋಪಿಸಿದರು.







