ಸಮಗ್ರ ನ್ಯೂಸ್: ಹೌದು, ಇಂತಹ ಒಂದು ಕಮೆಂಟ್ ಸಚಿವ ಅಂಗಾರರ ಪೇಸ್ ಬುಕ್ ಪೇಜ್ ನಲ್ಲಿ ಬಿದ್ದಿದ್ದು, ಆರ್.ಎಸ್.ಎಸ್ ನ ಪ್ರಚಾರಕರೋರ್ವರು ಸಚಿವರನ್ನು ಭರ್ಜರಿಯಾಗಿ ಕಾಲೆಳೆದಿದ್ದಾರೆ.

ವಿಷಾದದಿಂದಲೇ ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಆರ್ಎಸ್ಎಸ್ ಪ್ರಚಾರಕರೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಕರೊಬ್ಬರು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡಿರುವುದು ಈಗ ಚರ್ಚೆಯ ವಿಷಯವಾಗಿದೆ.

ಭಾರತ ಸರ್ಕಾರದ ಭೂವಿಜ್ಞಾನ ಮಂತ್ರಾಲಯ ಹಾಗೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಪಣಂಬೂರು ಕಡಲ ತೀರದಲ್ಲಿ ನಡೆದ ಕಡಲ ತೀರ ಸ್ವಚ್ಚತಾ ಅಭಿಯಾನ ಮತ್ತು ಸ್ವಚ್ಛ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿ ಹಾಗೂ ಅಭಿವೃದ್ಧಿ ಕಾರ್ಯದ ಬಗ್ಗೆ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮ ನಡೆಸುತ್ತಿದೆ. ಹಾಗಿದ್ದರೂ ನದಿ ಸ್ವಚ್ಛತೆ , ಕಡಲ ತೀರದ ಸ್ವಚ್ಛತೆಯ ಕಡೆಗೆ ಗಮನಹರಿಸಬೇಕಿತ್ತು.
ಈ ಕುರಿತಂತೆ ಸಚಿವರ ಅಧಿಕೃತ ಪೇಜ್ ನಲ್ಲಿ ಫೋಟೋ ವಿವರ ಹಾಕಿದ್ದು, ಇದಕ್ಕೆ ಬಹಿರಂಗವಾಗಿಯೇ ಆರ್ಎಸ್ಎಸ್ ಪ್ರಚಾರಕ ಜಯರಾಮ ಬೊಳ್ಳಾಜೆ ಎಂಬವರು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎರಡು ಪೋಸ್ಟ್ಗಳಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದು,
ಸುಳ್ಯವು ಬಿಜೆಪಿ ಹಾಗೂ ಆರ್ ಎಸ್ ಎಸ್ ಪ್ರಯೋಗ ಶಾಲೆಯಾಗಿದೆ. ಕಳೆದ ಹಲವು ಸಮಯಗಳಿಂದ ವಿವಿಧ ಪ್ರಯತ್ನಗಳು ಇಲ್ಲಿಯೇ ನಡೆದು ರಾಜ್ಯದವರೆಗೆ ವಿಸ್ತರಿಸಲಾಗಿದ್ದು. ಎಲ್ ಕೆ ಅಡ್ವಾಣಿ ಅವರಿಂದಲೂ ಬಿಜೆಪಿಗೆ ಸುಳ್ಯವು ದಕ್ಷಿಣ ಭಾರತದ ಹೆಬ್ಬಾಗಿಲು ಎಂದೇ ಕರೆಯಲಾಗಿತ್ತು.
ಹೀಗಿರುವಾಗ ಸುಳ್ಯ ಕ್ಷೇತ್ರದ ಶಾಸಕ ಹಾಗೂ ಸಚಿವರಾಗಿರುವ ಎಸ್.ಅಂಗಾರರ ಕಾರ್ಯಕ್ಷಮತೆಯ ಬಗ್ಗೆ ಆರ್ ಎಸ್ ಎಸ್ ಪ್ರಮುಖರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿಯೇ ಪ್ರತಿಕ್ರಿಯೆ ನೀಡಿರುವುದು ಸುಳ್ಯದ ವಸ್ತುಸ್ಥಿತಿಯನ್ನು ಎತ್ತಿ ತೋರಿಸುವಂತಿದೆ.
ಸುಳ್ಯದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯಲು ಬಾಕಿ ಇದೆ. ಗ್ರಾಮೀಣ ಭಾಗಗಳಿಗೆ ಹಲವು ಸೇತುವೆಗಳ ರಚನೆ ಇನ್ನೂ ನೆನೆಗುದಿಗೆ ಬಿದ್ದಿದೆ, ರಸ್ತೆಗಳ ಅವ್ಯವಸ್ಥೆ ಸೇರಿದಂತೆ ಮೂಲಭೂತ ಸಮಸ್ಯೆಗಳೇ ಆಗಾಗ ಚರ್ಚೆಯಾಗುತ್ತಿದೆ. ಇದೀಗ ಕೇಂದ್ರ ಸರ್ಕಾರದ ಯೋಜನೆಯೊಂದರ ಅನುಷ್ಟಾನ ಹಾಗೂ ಕಾರ್ಯ ಯೋಜನೆಯ ಬಗ್ಗೆ ಆರ್ ಎಸ್ ಎಸ್ ಪ್ರಚಾರಕರ ಮಾತುಗಳು ತೀರಾ ವಿಷಾದಿಂದ ಕೂಡಿತ್ತು ಹಾಗೂ ಖಡಕ್ ಆಗಿಯೇ ಪ್ರತಿಕ್ರಿಯೆ ಮಾಡಿದ್ದಾರೆ.
ಈ ಹಿಂದೆ ಈ ಕುರಿತಂತೆ ಮಾಧ್ಯಮಗಳು ವರದಿ ಮಾಡಿದಾಗ ಸಚಿವರು ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಇದೀಗ ತಮ್ಮದೇ ಕಾರ್ಯಕರ್ತರು, ಸಂಘದ ಪ್ರಮುಖರು ಸಚಿವರ ಕಾರ್ಯದಕ್ಷತೆಯನ್ನು ಪ್ರಶ್ನಿಸುತ್ತಿರುವುದು ವಿಪರ್ಯಾಸ.
