ಸಮಗ್ರ ನ್ಯೂಸ್: ರಸ್ತೆ ಕುಸಿತದ ಭೀತಿಯ ಹಿನ್ನೆಲೆ ಸಂಪಾಜೆ ಗೇಟ್ ನಲ್ಲಿ ಜು.18ರಂದು ರಾತ್ರಿಯಿಂದ ತಡೆಯಲಾಗಿದ್ದ ಲಾರಿಗಳಿಗೆ ಜು.19ರ ಮಂಗಳವಾರ ಬೆಳಗ್ಗೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಈ ವಾಹನಗಳು ವಿರಾಜಪೇಟೆ ಮೂಲಕ ದಾರಿಯನ್ನು ಬಳಸಿಕೊಂಡು ಹುಣಸೂರು ಮಾರ್ಗವಾಗಿ ಮೈಸೂರು ಅಥವಾ ಬೆಂಗಳೂರಿಗೆ ಹೋಗಬಹುದಾಗಿದೆ.
ಮಡಿಕೇರಿ –ಮಂಗಳೂರು ರಾಷ್ಟ್ರೀಯ ಹೆದ್ದಾರಿಯು ಮಡಿಕೇರಿ ಸಮೀಪದ ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಬರೆ ಕುಸಿತದ ಹಿನ್ನೆಲೆಯಲ್ಲಿ ವಾಹನಗಳಿಗೆ ಪರ್ಯಾಯ ಮಾರ್ಗವಾಗಿ ತಾಳತ್ತಮನೆ ಮೆಕೇರಿ ರಸ್ತೆ ಮೂಲಕ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಿನ್ನೆ ತಡರಾತ್ರಿ ಮೆಕೇರಿ ರಸ್ತೆ ಜರಿಯಲು ಶುರುವಾದ ಬಳಿಕ ಸಂಪಾಜೆ ಚೆಕ್ ಪೋಸ್ಟ್ ಬಳಿ ಎಲ್ಲ ವಾಹನಗಳನ್ನು ತಡೆ ಹಿಡಿಯಲಾಗಿತ್ತು. ಇದರಿಂದ ಸಂಪಾಜೆ ಬಳಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ನಂತರ ಕೆಎಸ್ ಆರ್ ಟಿಸಿ ಬಸ್ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಹೋಗುವುದಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಲಾರಿಗಳು ರಾತ್ರಿಯಿಂದ ಬೆಳಗ್ಗಿನ ತನಕ ಸುಮಾರು ೧ ಕಿ.ಮೀ.ಗೂ ಹೆಚ್ಚು ಕ್ಯೂನಲ್ಲಿ ನಿಂತುಕೊಂಡಿದ್ದವು. ಇದೀಗ ವಿರಾಜಪೇಟೆ ರಸ್ತೆ ಮೂಲಕ ವ್ಯವಸ್ಥೆಯಾದ ನಂತರ ಸಂಪಾಜೆ ಗೇಟ್ ನಿಂದ ವಾಹನಗಳನ್ನು ಬಿಡಲಾಗಿದೆ.







