“ಅಸಾನಿ’’ ಎಫೆಕ್ಟ್; ಕರಾವಳಿಯಲ್ಲಿ ಮುಂಗಾರಿನ ನೆನಪು| ಜಿಟಿಜಿಟಿ ಮಳೆಗೆ ಹೋಗೋದೆಲ್ಲಿಗೆ?

ಸಮಗ್ರ ನ್ಯೂಸ್: “ಅಸಾನಿ” ಚಂಡಮಾರುತದ ಪರಿಣಾಮ ಕರಾವಳಿ ಭಾಗದಲ್ಲಿ ಬುಧವಾರ ಉತ್ತಮ ಮಳೆ ಸುರಿದಿದೆ. ಬುಧವಾರ ಮುಂಜಾನೆಯೇ ಜಿಟಿ ಜಿಟಿ ಮಳೆ ಸುರಿಯಲಾರಂಭಿಸಿದ್ದು, ವಾತಾವರಣ ಕೂಲ್ ಆಗಿದೆ.

Ad Widget ... ..

ಮಂಗಳೂರು ನಗರದಲ್ಲಿ ಸಾಧಾರಣ ಮಳೆಯಾಗಿದ್ದು, ಮೋಡದ ವಾತಾವರಣ ಇತ್ತು. ಉಳಿದಂತೆ ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ, ಧರ್ಮಸ್ಥಳ, ಉಜಿರೆ, ಮಡಂತ್ಯಾರು, ವಿಟ್ಲ, ಕನ್ಯಾನ, ಸುರತ್ಕಲ್‌, ಸುಳ್ಯ,ಐವರ್ನಾಡು, ಬೆಳ್ಳಾರೆ ಕಲ್ಮಡ್ಕ, ಪಂಜ, ಸುಬ್ರಹ್ಮಣ್ಯ, ಗುತ್ತಿಗಾರು, ಅರಂತೋಡು, ಕಲ್ಲುಗುಂಡಿ, ಸಂಪಾಜೆ, ಕೊಲ್ಲಮೊಗ್ರು, ಕಡಬ, ಹರಿಹರ ಪಳ್ಳತ್ತಡ್ಕ, ಮೂಡುಬಿದಿರೆ, ಸುರತ್ಕಲ್‌, ಉಳ್ಳಾಲ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರ ಮಳೆಯಾಗಿದ್ದು, ಮಳೆಗಾಲದ ನೆನಪು ತರಿಸಿದೆ.

Ad Widget

ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲೂ ದಿನವಿಡೀ ಸಾಮಾನ್ಯ ಮಳೆಯಾಗಿದೆ. ಕೆಲವೆಡೆ ಗಾಳಿ ಸಹಿತ ಭಾರೀ ಮಳೆಯಾಗಿದೆ. ಉಡುಪಿ, ಕಾಪು, ಕಾರ್ಕಳ, ಬ್ರಹ್ಮಾವರ, ಹೆಬ್ರಿ, ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧೆಡೆ ನಿರಂತರ ಮಳೆ ಸುರಿದಿದೆ. ಮುಂಜಾನೆಯೇ ಮಳೆ ಆರಂಭಗೊಂಡಿದ್ದ ಹಿನ್ನೆಲೆಯಲ್ಲಿ ಜನರು ಮನೆಯಿಂದಲೇ ಹೊರಡು ವಾಗಲೇ ಕೊಡೆ, ರೈನ್‌ಕೋಟ್‌ ವ್ಯವಸ್ಥೆ ಮಾಡಿಕೊಂಡಿದ್ದರು.

ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ ೨೮.೪ ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ ೨೬.೫ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮಳೆಯಿಂದಾಗಿ ಸಾಮಾನ್ಯಕ್ಕಿಂತ ಸುಮಾರು ೬ ಡಿಗ್ರಿ ಸೆಲ್ಸಿಯಸ್ ನಷ್ಟು ಗರಿಷ್ಠ ತಾಪಮಾನದಲ್ಲಿ ಇಳಿಕೆಯಾಗಿದೆ. ಗುರುವಾರ(ಮೇ.12)ರಂದು ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದ್ದು, ಮಳೆ ಮತ್ತೆ ಆರಂಭಗೊಂಡಿದೆ.

ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಅಲ್ಲಲ್ಲಿ ಸಣ್ಣಪುಟ್ಟ ಹಾನಿ ಸಂಭವಿಸಿದ್ದು ಹೊರತುಪಡಿಸಿದರೆ ಅಸಾನಿ ಕೃಷಿಗೆ ಪೂರಕವಾಗಿದೆ ಎನ್ನುತ್ತಾರೆ ಕೃಷಿಕರು.

Leave a Comment

Your email address will not be published. Required fields are marked *