ಸಮಗ್ರ ನ್ಯೂಸ್: ಇದೇ ಮೊದಲ ಬಾರಿಗೆ ಕಡಲ ತೀರದಲ್ಲಿ ಯುವ ಜೋಡಿಯೊಂದು ಸಪ್ತಪದಿ ತುಳಿದಿದೆ. ಸಮುದ್ರ ತೀರದಲ್ಲಿ ಸಕ್ಕರೆ ನಾಡಿನ ಜೋಡಿಯೊಂದು ಸಪ್ತಪದಿ ತುಳಿದಿದೆ. ಪ್ರಕೃತಿ ಮಡಿಲಲ್ಲಿ ಸರಳವಾಗಿ ಮದುವೆ ಆಗಿದ್ದರೂ ಪ್ರಕೃತಿಯ ಸೌಂದರ್ಯ ಮದ್ವೆಗೆ ಅದ್ದೂರಿತನ ನೀಡಿದೆ. ಈ ಜೋಡಿಯ ಮದುವೆ ಫೋಟೋಗಳೂ ವೈರಲ್ ಆಗಿದ್ದು, ವ್ಹಾವ್ ಎನ್ನುತ್ತಿದ್ದಾರೆ ನೆಟ್ಟಿಗರು.
ಮಂಡ್ಯದ ಲಿಂಗಾಯತ ಸಮುದಾಯದ ಯುವಕ-ಯುವತಿ ಕುಂದಾಪುರದ ಎಂ.ಕೋಡಿ ಸಮೀಪ ಬುಧವಾರ ಬೆಳಗ್ಗೆ ಕಡಲ ತೀರದ ಪ್ರಕೃತಿ ಮಡಿಲಲ್ಲಿ ಮದುವೆಯಾದರು. ಕಡಲ ತೀರದಲ್ಲೇ ವಿವಾಹ ಮಂಟಪ ನಿರ್ಮಿಸಲಾಗಿತ್ತು. ಕಟ್ಕೇರಿ ಶಿವಾನಂದ ಐತಾಳ್ ಸುಲಗ್ನೇ ಸಾವಧಾನ ಮಂತ್ರದ ಮಂಗಳ ಸೂತ್ರ ಧಾರಣೆ ಮಾಡಿಸಿದರು. ಬ್ರಾಹ್ಮಣ ಸಂಪ್ರದಾಯ ಪುರೋಹಿತರ ಉಪಸ್ಥಿತಿಯಲ್ಲಿ ಮದುವೆ ಆಗಿದ್ದು, ವಧು-ವರನ ಕಡೆಯವರು ಭಾಗವಹಿಸಿದ್ದರು. ಆನೆಗುಡ್ಡೆ ದೇವಸ್ಥಾನದ ಪ್ರಸಾದವೇ ಮದುವೆ ಭೋಜನವಾಗಿತ್ತು.
ಪ್ರತಿಯೊಬ್ಬರಿಗೂ ಮದ್ವೆ ಬಗ್ಗೆ ನೂರಾರು ಕನಸು ಇರುತ್ತೆ. ಹೀಗೆ ನಡೆಯಬೇಕು, ಇಂತಹದ್ದೇ ಕಲ್ಯಾಣ ಮಂಟಪ, ಧಿರಿಸು, ಆಭರಣ, ಭೋಜನದ ಮೆನು, ಪುಷ್ಪಾಲಂಕಾರ… ಅಬ್ಬಬ್ಬಾ ಒಂದಲ್ಲ, ಎರಡಲ್ಲ… ಆದರೆ ಪ್ರಕೃತಿ ಮಡಿಲಲ್ಲಿ ತೆರೆದ ಮಂಟಪ ನಿರ್ಮಿಸಿ ಮದ್ವೆ ಆಗುವುದು ವಿಶೇಷ.






