ಸಮಗ್ರ ನ್ಯೂಸ್ : ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಅಹಿತಕರ ಘಟನೆಗಳಿಗೆ ಕಾರಣವಾಗಿದ್ದ ಹಿಜಾಬ್ ಬಗ್ಗೆ ರಾಜ್ಯ ಹೈಕೋರ್ಟ್ ನೀಡಿದ ತೀರ್ಪು ವಿರೋಧಿಸಿ ಮಂಗಳೂರಿನಲ್ಲಿ ವಿದ್ಯಾರ್ಥಿ ಸಮನ್ವಯ ಸಮಿತಿ ಹೆಸರಿನ ವಿದ್ಯಾರ್ಥಿಗಳ ತಂಡವೊಂದು ಮಾ 25 ರಂದು ಸಂಜೆ ದಿಢೀರ್ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ 100ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ನಗರದ ಕ್ಲಾಕ್ ಟವರ್ ಬಳಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಹಿಜಾಬ್ ಧಾರಿ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದು, ನ್ಯಾಯಕ್ಕಾಗಿ ಅಗ್ರಹಿಸುತ್ತಿದ್ದ ಅವರು ‘ಅಲ್ಲಾಹೋ ಅಕ್ಬರ್’ ಘೋಷಣೆಯನ್ನು ಪದೇ ಪದೇ ಕೂಗುತ್ತಿದ್ದರು. ಹಿಜಾಬ್ ನಮ್ಮ ಹಕ್ಕು , ಹಿಜಾಬ್ ನಮ್ಮ ಘನತೆ ಎಂಬ ಅರ್ಥ ಉಳ್ಳ ಪ್ಲೆಕ್ಸ್ ಗಳನ್ನು ಹಾಗೂ ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದು ವಿದ್ಯಾರ್ಥಿ ಸಮೂಹ ಪ್ರತಿಭಟನೆ ನಡೆಸಿತು.
ಪೊಲೀಸ್ ಅನುಮತಿಯೊಂದಿಗೆ ಈ ಪ್ರತಿಭಟನೆ ನಡೆದಿದ್ದು, ವಿದ್ಯಾರ್ಥಿಗಳ ಗುಂಪು ಪಡೆದಿತ್ತು . ಆದರೆ ಪ್ರತಿಭಟನೆ ಸಂದರ್ಭ ವಿದ್ಯಾರ್ಥಿಗಳ ತಂಡ ರಸ್ತೆಗೆ ಅಡ್ಡಲಾಗಿ ವಾಹನ ಸಂಚಾರಕ್ಕೆ ತಡೆಯೊಡ್ಡಲು ಯತ್ನಿಸಿದಾಗ ಪೊಲೀಸರು ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳನ್ನು ತೆರವುಗೊಳಿಸಲು ಯತ್ನಿಸಿದರು.
ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರ ಮಧ್ಯೆ ವಾಗ್ವಾದ ನಡೆಯಿತು. ರಸ್ತೆ ಮಧ್ಯೆ ಪ್ರತಿಭಟನೆಗೆ ಕೂರಲು ಅವಕಾಶ ಕೊಡುವಂತೆ ವಿದ್ಯಾರ್ಥಿಗಳ ತಂಡ ಆಗ್ರಹಿಸಿತ್ತು. ಆದರೇ ಪೊಲೀಸರು ರಸ್ತೆ ತಡೆ ನಡೆಸಿ ಪ್ರತಿಭಟಿಸಲು ಅವಕಾಶ ನಿರಾಕರಿಸಿದರು. ಈ ಹಂತದಲ್ಲಿ ಪೊಲೀಸರ ವಿರುದ್ದ ಧಿಕ್ಕಾರ ಕೂಗಿ ರಸ್ತೆಯಲ್ಲೇ ವಿದ್ಯಾರ್ಥಿನಿಯರು ಕೂತರು .ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು
ಬಳಿಕ ಪ್ರತಿಭಟನಕಾರರ ಜತೆ ಮಾತುಕತೆ ನಡೆಸಿದ ಮಂಗಳೂರು ಎಸಿಪಿ ಬಿಎ ಹೆಗ್ಡೆ ನೇತ್ರತ್ವದಲ್ಲಿ ಪೊಲೀಸರ ತಂಡ ವಿದ್ಯಾರ್ಥಿನಿಯರನ್ನು ಮನವೊಲಿಸಿದರು.
ಹಿಜಾಬ್ ವಿಚಾರವಾಗಿ ಹೈಕೋರ್ಟ್ ತೀರ್ಪನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಕಾಲೇಜುಗಳ ಮತ್ತು ಸರಕಾರದ ಅಸಂವಿಧಾನಿಕ ನಡೆಗಳ ವಿರುಧ್ದ ಮಂಗಳೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಮನ್ವಯ ಸಮಿತಿ ಈ ಪ್ರತಿಭಟನೆ ನಡೆಸಿರುವುದಾಗಿ ಸಮಿತಿಯ ಅಧ್ಯಕ್ಷ ರಿಯಾಝ್ ಅಂಕತ್ತಡ್ಕ ಪ್ರತಿಭಟನೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿದ್ದರು.







