ಬಂಟ್ವಾಳ: ಸ್ಕೂಟರ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಸಮೀಪದ ಬೊಳ್ಳುಕಲ್ಲು ಸಮೀಪ ಇಂದು ಸಂಭವಿಸಿದೆ.
ಕನ್ಯಾನ ಪರಕಜೆ ನಿವಾಸಿ ಮಂಜು ಬೆಳ್ಚಡ ಎಂಬವರ ಪುತ್ರ ಗಣೇಶ್ ಬಂಗೇರ (54) ಮೃತ ಸ್ಕೂಟರ್ ಸವಾರ. ಈತ ತನ್ನ ದ್ವಿಚಕ್ರ ವಾಹನದಲ್ಲಿ ಉಪ್ಪಿನಂಗಡಿ ಕಡೆಗೆ ಸಂಚರಿಸುತ್ತಿದ್ದ ವೇಳೆ ಬುಡೋಳಿ ಸಮೀಪ ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಕೂಟರ್ ಲಾರಿಯ ಅಡಿಯಲ್ಲಿ ಸಿಲುಕಿದ್ದು ಗಣೇಶ್ ಬಂಗೇರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ತಕ್ಷಣವೇ ಮಾಣಿ ಸೋಶಿಯಲ್ ಇಕ್ವಾ ಫೆಡರೇಶನ್ ನ ಕಾರ್ಯಕರ್ತರಾದ ಶರೀಫ್, ಶಂಶೀರ್ ಬುಡೋಳಿ ಹಾಗೂ ಇಕ್ಬಾಲ್ ಅವರು ಸ್ಥಳಕ್ಕೆ ಧಾವಿಸಿ ಇಕ್ವಾ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ.
ಸ್ಥಳಕ್ಕೆ ವಿಟ್ಲ ಪೊಲೀಸ್ ಇನ್ಸ್ಪೆಕ್ಟರ್ ನಾಗರಾಜ್ ಎಚ್.ಈ. ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.






