ಸುಳ್ಯ. ಮೇ.17: ಹೌದು. ಈ ಮಾತನ್ನು ದಿನಂಪ್ರತಿ ಈ ಭಾಗದ ಜನ ಕೇಳುತ್ತಾ ಬರುತ್ತಿದ್ದಾರೆ. ಜೊತೆಗೆ ಹಿಡಿಶಾಪವನ್ನೂ ಹಾಕುತ್ತಿದ್ದಾರೆ. ಕೆಲವೊಮ್ಮೆ ಕೈಕಾಲು ಮುರಿದುಕೊಂಡು ಕಣ್ಣೀರನ್ನೂ ಒರೆಸಿಕೊಳ್ಳುತ್ತಾ ಈ ಊರಲ್ಲಿ ಹುಟ್ಟಬಾರದಿತ್ತು ಅಂದುಕೊಳ್ತಾರೆ. ಅಷ್ಟಕ್ಕೂ ಈ ಮಡಪ್ಪಾಡಿಯಲ್ಲಿ ಏನಾಯಿತು? ಯಾಕೇ ಹೀಗೆ ಆಗ್ತಾ ಇದೆ. ಈ ಸ್ಟೋರಿನಲ್ಲಿ ಓದಿ.

ಮಡಪ್ಪಾಡಿ ಸುಳ್ಯ ತಾಲೂಕಿನ ಅತ್ಯಂತ ಪುಟ್ಟದಾದ ಹಾಗೂ ನೈಸರ್ಗಿಕ ಸಂಪತ್ತನ್ನು ತನ್ನೊಳಗೆ ಹೊತ್ತು ಕೊಂಡ ಸುಂದರ ಹಳ್ಳಿ. ತಾಲೂಕಿನ ಪ್ರಮುಖ ಜನಪ್ರತಿನಿಧಿಗಳ ತವರೂರು. ಇಷ್ಟೆಲ್ಲಾ ಇದ್ದರೂ ಈ ಜನ ಮಳೆಗಾಲದಲ್ಲಿ ಕೆಸರು ಗದ್ದೆಯ ರಸ್ತೆಯಲ್ಲಿ ಓಡಾಡುವುದು ತಪ್ಪುತ್ತಿಲ್ಲ.
ಮಡಪ್ಪಾಡಿ ಸಂಪರ್ಕಿಸುವ ಸೇವಾಜೆ- ಮಡಪ್ಪಾಡಿ ರಸ್ತೆ ಜೀರ್ಣಾವಸ್ಥೆಗೆ ತಲುಪಿ ಹಲವು ವರ್ಷಗಳೆ ಕಳೆಯಿತು. ಕೇವಲ 5 ಕಿ.ಮಿ ದೂರವಿರುವ ಜಿ.ಪಂ ರಸ್ತೆಯನ್ನು ದುರಸ್ಥಿಗೊಳಿಸದೇ ತೀರಾ ಹದೆಗೆಟ್ಟಿದ್ದು, ಈ ಭಾಗದ ಜನ ದಿನಂಪ್ರತಿ ಕೆಸರು ಮೆತ್ತಿಕೊಂಡ ಓಡಾಡುತ್ತಾ ನಮ್ಮ ಹಣೆಬರಹವೇ ಸರಿ ಇಲ್ಲ ಎಂದು ಗೊಣಗಿಕೊಳ್ತಾ ಇದ್ದಾರೆ.
ಈ ಹಿಂದೆ ಈ ಭಾಗದಲ್ಲಿ ಗ್ರಾಮವಾಸ್ತವ್ಯ ಮಾಡಿದ ಕಾರ್ಯನಿರತ ಪತ್ರಕರ್ತರ ಸಂಘವು ಸಚಿವ ಕೆ.ಎಸ್. ಈಶ್ವರಪ್ಪರಿಗೆ ಮನವಿ ಸಲ್ಲಿಸಿದ ಮೇರೆಗೆ ಒಂದು ಕೋಟಿ ಅನುದಾನವನ್ನೂ ಮೀಸಲಿರಿಸಿದ್ದರು. ಆದರೆ ಈ ಹಣವೂ ಬಿಡುಗಡೆ ಆಗಿಲ್ಲ.

ಸ್ವತಃ ಸಚಿವರ ತವರೂರಿಗೆ ಅಂಟಿಕೊಂಡಿರುವ ಈ ಗ್ರಾಮದ ರಸ್ತೆ ದುರಸ್ಥಿಗೊಳಿಸಲು ಸಚಿವರಿಗೇ ಮನಸ್ಸಿಲ್ಲವೋ ತಿಳಿಯದು. ಒಟ್ಟಾರೆ ಈ ಮಳೆಗಾಲವೂ ಕೆಸರಿನೊಂದಿಗೆ ಸಾಗಬೇಕು ಎನ್ನುತ್ತಿದ್ದಾರೆ ಗ್ರಾಮವಾಸಿಗಳು. ಯಾರಾದರೂ ನಮ್ಮ ಅಳಲನ್ನು ಕೇಳಿ ಎಂದು ಅಲವತ್ತುಕೊಳ್ಳುವ ಮಡಪ್ಪಾಡಿ ಮಂದಿಯ ಗೋಳು ಯಾವಾಗ ನಿಲ್ಲುತ್ತೋ ಕಾದುನೋಡಬೇಕಿದೆ.